ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ


ಒಬ್ಬ ಕುಂಬಾರ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು. ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು. ಇಲ್ಲವಾದಲ್ಲಿ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ. ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು. 

ಈ ಗಾದೆಯಿಂದ ನಾವು ತಿಳಿದುಕೊಳ್ಳುವ ಅಂಶವೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

- ಸೀಮಾ ಕಂಚಿಬೈಲು

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚಣೆಗಳು

ಜನವರಿ
01 – ವಿಶ್ವ ಶಾಂತಿ ದಿನ.
02 – ವಿಶ್ವ ನಗುವಿನ ದಿನ.
10 - ವಿಶ್ವ ಹಿಂದಿ ದಿವಸ
12 – ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 – ಭೂ ಸೇನಾ ದಿನಾಚರಣೆ.
25 – ಅಂತರರಾಷ್ಟ್ರೀಯ ತೆರಿಗೆ ದಿನ.
26 - ಭಾರತದ ಗಣರಾಜ್ಯೋತ್ಸವ.
28 – ಸರ್ವೋಚ್ಛ ನ್ಯಾಯಾಲಯ ದಿನ.
30 – ಹುತಾತ್ಮರ ದಿನ(ಗಾಂಧಿಜೀ ಪುಣ್ಯತಿಥಿ)
ಜನೆವರಿ ಕೊನೆಯ ರವಿವಾರ - ಕುಷ್ಟರೋಗ ನಿವಾರಣಾ ದಿನ

ಫೆಬ್ರುವರಿ
4 - ವಿಶ್ವ ಕ್ಯಾನ್ಸರ್ ದಿನ.
14 - ವ್ಯಾಲೆಂಟೈನ್ ದಿನ.
20 — ಅಂತರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
21- ವಿಶ್ವ ಮಾತೃಭಾಷಾ ದಿನ.
22 – ಸ್ಕೌಟ್ & ಗೈಡ್ಸ್ ದಿನ.
23 – ವಿಶ್ವ ಹವಾಮಾನ ದಿನ.
24 - ಕೇಂದ್ರ ಅಬಕಾರಿ ದಿನ.
28 – ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ
03 - ವಿಶ್ವ ವನ್ಯಜೀವಿ ದಿನ.
04 - ರಾಷ್ಟ್ರೀಯ ಸುರಕ್ಷಾ ದಿವಸ.
08 – ಅಂತರಾಷ್ಟ್ರೀಯ ಮಹಿಳಾ ದಿನ.
12 – ದಂಡಿ ಸತ್ಯಾಗ್ರಹ ದಿನ.
13 - ವಿಶ್ವ ಧೂಮಪಾನ ರಹಿತ ದಿನ
15 – ವಿಶ್ವ ಬಳಕೆದಾರರ ದಿನ.
20 - ವಿಶ್ವ ಗುಬ್ಬಚ್ಚಿಗಳ ದಿನ
21 – ವಿಶ್ವ ಅರಣ್ಯ ದಿನ.
22 – ವಿಶ್ವ ಜಲ ದಿನ.

ಏಪ್ರಿಲ್
02 – ವಿಶ್ವ ಆಟಿಸಂ ಜಾಗೃತಿ ದಿನ.
07 – ವಿಶ್ವ ಆರೋಗ್ಯ ದಿನ.
10 - ವಿಶ್ವ ಹೋಮಿಯೋಪಥಿ ದಿನ.
14 – ಡಾ. ಅಂಬೇಡ್ಕರ್ ಜಯಂತಿ.
22 – ವಿಶ್ವ ಭೂದಿನ.
23 – ವಿಶ್ವ ಪುಸ್ತಕ ದಿನ.
24 -   ರಾಷ್ಟ್ರೀಯ ಪಂಚಾಯತ್ ರಾಜ್ ದಿನ
30 - ಆಯುಷ್ಮಾಮಾನ್ ಭಾರತ ದಿನ

ಮೇ
01 – ಕಾರ್ಮಿಕರ ದಿನ.
02 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 – ರಾಷ್ಟ್ರೀಯ ಶ್ರಮಿಕರ ದಿನ.
ಮೊದಲನೇ ರವಿವಾರ - ವಿಶ್ವ ನಗುವಿನ ದಿನ
ಮೊದಲನೇ ಮಂಗಳವಾರ - ವಿಶ್ವ ಅಸ್ತಮಾ ದಿನ
08 – ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 – ಅಂತರಾಷ್ಟ್ರೀಯ ಕುಟುಂಬ ದಿನ.
ಎರಡನೇ ರವಿವಾರ - ವಿಶ್ವ ಅಮ್ಮಂದಿರ ದಿನ
21 - ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ.
24 - ಕಾಮನ್ವೆಲ್ತ್ ದಿನ.
31 - ವಿಶ್ವ ತಂಬಾಕು ರಹಿತ ದಿನ.

ಜೂನ್ 
02 - ವಿಶ್ವ ಹಾಲು ದಿನ.
03 - ವಿಶ್ವ ಸೈಕಲ್ ದಿನ
05 – ವಿಶ್ವ ಪರಿಸರ ದಿನ.
08 - ವಿಶ್ವ ಸಾಗರ ದಿನ.
12 - ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ
14 – ವಿಶ್ವ ರಕ್ತ ದಾನಿಗಳ ದಿನ
ಮೂರನೇ ರವಿವಾರ - ವಿಶ್ವ ಅಪ್ಪಂದಿರ ದಿನ
20 - ವಿಶ್ವ ನಿರಾಶ್ರಿತರ ದಿನ
21 - ಅಂತಾರಾಷ್ಟ್ರೀಯ ಯೋಗ ದಿವಸ.
26 – ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ
01 – ರಾಷ್ಟ್ರೀಯ ವೈದ್ಯರ ದಿನ.
11 – ವಿಶ್ವ ಜನಸಂಖ್ಯಾ ದಿನ.
19 - ಬ್ಯಾಂಕ್ ರಾಷ್ಟ್ರೀಕರಣ ದಿನ.
28 - ವಿಶ್ವ ಹೆಪಟೈಟಿಸ್ ದಿನ.

ಅಗಷ್ಟ್ 
ಮೊದಲನೇ ರವಿವಾರ — ಸ್ನೇಹಿತರ ದಿನಾಚರಣೆ
06 – ಹಿರೋಶಿಮಾ ದಿನ.
09 – ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 
12 — ಅಂತಾರಾಷ್ಟ್ರೀಯ ಯುವ ದಿನ.
15 – ಭಾರತದ ಸ್ವಾತಂತ್ರ್ಯ ದಿನಾಚರಣೆ.
19 — ವಿಶ್ವ ಛಾಯಾಗ್ರಾಹಣ ದಿನಾಚರಣೆ.
29 – ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್
05 – ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 – ವಿಶ್ವ ಸಾಕ್ಷರತಾ ದಿನ
14 – ಹಿಂದಿ ದಿನ(ಹಿಂದಿ ದಿವಸ್)
15 – ಇಂಜಿನಿಯರ್ ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 – ವಿಶ್ವ ಓಝೋನ್ ದಿನ.
21— ಅಲ್ಜಮೈರ್ ದಿನ
26 — ವಿಶ್ವ ಕಿವುಡರ ದಿನ
27 — ವಿಶ್ವ ಪ್ರವಾಸೋದ್ಯಮ ದಿನ
28 – ವಿಶ್ವ ಹೃದಯ ದಿನ.

ಅಕ್ಟೋಬರ್
01 — ವಿಶ್ವ ಹಿರಿಯ ನಾಗರಿಕರ ದಿನ
02 – ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
04 — ವಿಶ್ವ ಪ್ರಾಣಿ ಸಂರಕ್ಷಣಾ ದಿನ
05 – ವಿಶ್ವ ಶಿಕ್ಷಕರ ದಿನ.
08 – ವಾಯು ಸೇನಾ ದಿನ
09 – ವಿಶ್ವ ಅಂಚೆ ದಿನ.
10 – ವಿಶ್ವ ಮಾನಸಿಕ ಆರೋಗ್ಯ ದಿನ.
11 — ವಿಶ್ವ ಹೆಣ್ಣು ಮಗುವಿನ ದಿನ
16 – ವಿಶ್ವ ಆಹಾರ ದಿನ.
24 – ವಿಶ್ವ ಸಂಸ್ಥೆಯ ದಿನ.
31 – ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

ನವೆಂಬರ್
01 – ಕನ್ನಡ ರಾಜ್ಯೋತ್ಸವ ದಿನ
07 — ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
14 – ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ/ ವಿಶ್ವ ಮಧುಮೇಹ ದಿನಾಚರಣೆ.
21 — ವಿಶ್ವ ದೂರದರ್ಶನ ದಿನ
29 – ಅಂತರರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್
01 – ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 – ವಿಶ್ವ ಅಂಗವಿಕಲರ ದಿನ.
04 – ನೌಕಾ ಸೇನಾ ದಿನ.
07 – ಧ್ವಜ ದಿನಾಚರಣೆ.
10 – ವಿಶ್ವ  ಮಾನವ ಹಕ್ಕುಗಳ ದಿನ
11 — ಅಂತಾರಾಷ್ಟ್ರೀಯ ಪರ್ವತಗಳ ದಿನ
16 — ವಿಜಯ ದಿವಸ
22 — ರಾಷ್ಟ್ರೀಯ ಗಣಿತ ದಿನ ( ಶ್ರೀನಿವಾಸ್ ರಾಮಾನುಜನ್ ಜನ್ಮದಿನ)
23 – ರೈತರ ದಿನ (ಚರಣಸಿಂಗ್ ಜನ್ಮ ದಿನ)
25 — ಕ್ರಿಸ್ಮಸ್

ಬೇಸಿಗೆ ರಜೆಯ ಸದ್ವಿನಿಯೋಗ

     

        ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅವರಿಗೆ ಪರೀಕ್ಷೆ ಮುಗಿದು ರಜೆ ಬಂತೆಂದರೆ ಸಾಕು ಬಿಸಿಲಿನ ಬೇಗೆ ಸೆಕೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಓದಬೇಕು ಹೋಂವರ್ಕ್ ಮಾಡಬೇಕು, ಅಥವಾ ಶಾಲೆಗೆ ಹೋಗಬೇಕು ಅನ್ನುವ ಒತ್ತಡ ಇರುದಿಲ್ಲ ಅಲ್ಲವೇ? ಅವರು ಬೇಸಿಗೆ ರಜೆಗೆ ಅಂತಲೇ ತಮ್ಮ ಕಾರ್ಯಕ್ರಮ ಗಳ ಪಟ್ಟಿ ಮಾಡಿ ಇಟ್ಟುಕೊಂಡಿರುತ್ತಾರೆ. ವರ್ಷ ಪೂರ್ತಿ ಕಷ್ಟಪಟ್ಟು ಓದಿದ ಎಳೆಯ ಮಕ್ಕಳ   ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಬೇಸಿಗೆಯ ಈ ವಿರಾಮ ಅಗತ್ಯವೂ ಹೌದು.

ಮಕ್ಕಳ ಕಲಿಕೆಗೆ ಪೂರಕ. ಐತಿಹಾಸಿಕ ಸ್ಥಳಗಳ ಭೇಟಿ
   ಈ ರಜೆಯಲ್ಲಿ ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ವಾಸಿಸುವ  ಕುಟುಂಬಗಳು ತಮ್ಮ ಪಟ್ಟಣ ಹಳ್ಳಿಗಳಿಗೆ ಹೋಗುವುದು ಇದೆ. ಅಲ್ಲಿ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಮನೆ ಅವರು ಕಲಿತ ಶಾಲೆ ಇದನ್ನೆಲ್ಲ ನೋಡಿ ನಲಿವುವುದು ಉಂಟು. ಬಂಧು ಬಳಗ ಅಜ್ಜಿ ಅಜ್ಜನ ಸಾನಿಧ್ಯದಲ್ಲಿ ಮಕ್ಕಳು ಶಾಲೆಯಲ್ಲಿ ಕಲಿಯುವ ಪಾಠಗಳನ್ನು ಕಲಿಯುತ್ತಾರೆ. ಪರಸ್ಪರ ಹೊಂದಾಣಿಕೆ, ಹಂಚಿಕೊಳ್ಳುವ ಗುಣ ಮತ್ತು  ಹಿರಿ ಕಿರಿಯರ ಜೊತೆ ನಡುವಳಿಕೆ ಮುಂತಾದ ಗುಣಗಳನ್ನು ಮಕ್ಕಳು ನೋಡಿಯೇ ಕಲಿಯುತ್ತಾರೆ.

   ಹೊಸ ಜಾಗಗಳಿಗೆ ಪ್ರವಾಸ ಹೋಗುವುದು ಈ ನಡುವೆ ಜಾಸ್ತಿಯಾಗಿದೆ. ದೇಶ ಸುತ್ತು ಅಥವಾ ಕೋಶ ಓಡು ಎನ್ನುವಂತೆ ಮಕ್ಕಳ ಸಮಗ್ರ. ಬೆಳವಣಿಗೆಗೆ ಇಂತಹ ಪ್ರವಾಸಗಳು ತುಂಬಾ ಸಹಕಾರಿ. ಸಾಮಾನ್ಯವಾಗಿ ಜನರು ಮಕ್ಕಳ ಜೊತೆ  ಐತಿಹಾಸಿಕ ತಾಣಗಳು,  ಗಿರಿಧಾಮಗಳು , ಸಮುದ್ರ ತೀರಗಳು ಅಥವಾ ಅಭಯಾರಣ್ಯ ಗಳಿಗೆ ಭೇಟಿ ಕೊಡುತ್ತಾರೆ.   ನಮ್ಮ ಇತಿಹಾಸ, ಪ್ರಾಕೃತಿಕ ಹಾಗೂ ಜೈವಿಕ  ವೈವಧ್ಯತೆಯನ್ನು ತಿಳಿಸಿಕೊಡಲು ಇದಕ್ಕಿಂತ ಬೇರೆ ಪ್ರಯೋಗಶಾಲೆ ಬೇಕೆ?

    ಬೇಸಿಗೆ ರಜೆ ಮಕ್ಕಳ ಕೌಶಲಾಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ. ಶಾಲಾ ದಿನಗಳ ಒತ್ತಡದಲ್ಲಿ ಮಕ್ಕಳಲ್ಲಿ ಇರುವ ಆಸಕ್ತಿ ಹವ್ಯಾಸಗಳಿಗೆ ಸಮಯ ಸಿಗಲಿಕ್ಕಿಲ್ಲ. ಈ ಸಮಯದಲ್ಲಿ ಈಜು ಮುಂತಾದ ಅವರ ನೆಚ್ಚಿನ ಆಟೋಟ ಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಅವರಲ್ಲಿ ಅಡಗಿರುವ ಕೌಶಲ್ಯ ಬೆಳಕಿಗೆ ಬರಲು ಅವಕಾಶ ಸಿಗುತ್ತದೆ. ಇನ್ನೂ,  ಮಕ್ಕಳು ಕಲಿಕೆ ಯಾವುದಾದರೂ ವಿಷಯದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದನ್ನು ಪರಿಹರಿಸಿ ಅವರ ಮುಂದಿನ ವರ್ಷದ ಓದನ್ನು ಸರಳವಾಗಿಸಬಹುದು.

    ಹೀಗೆ ಮಕ್ಕಳನ್ನು ಮೊಬೈಲ್ ಅಥವಾ ಟೀವಿ ಆಧಿನ ಮಾಡದಂತೆ ಮಾಲ್ ಮಿಲ್ಟಿಪ್ಲೆಕ್ಸ್ ಗಳ ಆಮಿಷಗಳಿಗೆ ಬೀಳದಂತೆ ಬೇಸಿಗೆಯ ಕಾಲಾವಕಾಶ ವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ತಂದೆ ತಾಯಿಯರ ಕೈಲಿಯಲ್ಲಿದೆ

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತೂ
ನೋಟ ನೋಡಲು

ನೋಡಿತೇನದು ನೋಡಿತೇನದು
ಬೆಟ್ಟದ ಇನ್ನೊಂದು ಭಾಗಾ
ಬೆಟ್ಟದ ಇನ್ನೊಂದು ಭಾಗ
ಕರಡಿ ನೋಡಿತು

ಹಲಸು ತಂದಿತು...ಜೇನ ಕಲಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು!

ಭಾರತದ ಮೊದಲ ಮಹಿಳೆಯರು


  1. ಪ್ರಧಾನ ಮಂತ್ರಿ  -  ಇಂದಿರಾ ಗಾಂಧಿ
  2. ರಾಷ್ಟ್ರಪತಿ - ಪ್ರತಿಭಾ ಪಾಟೀಲ್
  3. ಸುಪ್ರೀಂ ಕೋರ್ಟ್ ಜಡ್ಜ್ - ಫಾತಿಮಾ ಬೀಬಿ
  4. ಮುಖ್ಯಮಂತ್ರಿ - ಸುಚೇತಾ ಕೃಪಾಲಾನಿ
  5. ಮಂತ್ರಿ - ರಾಜಕುಮಾರಿ ಅಮೃತ್ ಕೌರ್
  6. ಐ ಪಿ ಎಸ್ ಅಧಿಕಾರಿ - ಕಿರಣ್ ಬೇಡಿ
  7. ಐ ಎ ಎಸ್ ಅಧಿಕಾರಿ - ಅನ್ನ ರಾಜಂ ಮಲ್ಹೋತ್ರಾ
  8. ಭಾರತ ರತ್ನ - ಇಂದಿರಾ ಗಾಂಧಿ
  9. ನೋಬೆಲ್ ಪಾರಿತೋಷಕ ಪಡೆದವರು - ಮದರ್ ತೆರೇಸಾ
  10. ಜ್ಞಾನಪೀಠ ಪಡೆದವರು - ಆಶಪೂರ್ಣ ದೇವಿ
  11. ವೈದ್ಯೆ - ಆನಂದಿಬಾಯಿ ಜೋಶಿ
  12. ಎವರೆಸ್ಟ್ ಪರ್ವತಾರೋಹಿ - ಬಚೆಂದ್ರಿ ಪಾಲ್
  13. ಮಿಸ್ ವರ್ಲ್ಡ್ - ರೀಟಾ ಫರಿಯ
  14. ಮಿಸ್ ಯೂನಿವರ್ಸ್ - ಸುಶ್ಮಿತಾ ಸೇನ್
  15. ಕಾಂಗ್ರೆಸ್ ಅಧ್ಯಕ್ಷೆ - ಅನಿ ಬೆಸೆಂಟ್
  16.   ಪೂರ್ಣ ಪ್ರಮಾಣದ ರಕ್ಷಾ ಮಂತ್ರಿ -  ನಿರ್ಮಲಾ ಸೀತಾರಾಮನ್
  17. ಅಂತರಿಕ್ಷ ಯಾನಿ - ಕಲ್ಪನಾ ಚಾವ್ಲಾ
  18. ಒಲಂಪಿಕ್ ಪದಕ ವಿಜೇತೆ - ಕರಣಂ ಮಲ್ಲೇಶ್ವರಿ
  19. ಪೈಲೆಟ್ - ಸರಳ ಠಕರಾಲ್
  20. ಇಂಜಿನಿಯರ್- ರಾಜೇಶ್ವರಿ ಚಟರ್ಜಿ


ಬಸ್ ಬಂತು ಬಸ್






ಬಸ್ ಬಂತು ಬಸ್, ಗೌರ್ನಮೆಂಟ್ ಬಸ್
ಕೆಂಪು ಬಿಳಿ ಬಣ್ಣಾ, ನೋಡು ಬಾರಣ್ಣಾ

ಆರು ಚಕ್ರ ಇರುವುದು, ಎರಡು ಲೈಟ್ ಉರಿವುದು
ನಾ ಕಂಡಕ್ಟರ್ ಆಗುವೆ, ರೈಟ್ ರೈಟ್ ಹೇಳುವೆ
ಸೀಟಿಯನ್ನು ಊದುವೆ!

ಕರುನಾಡಿನ ಕೆಲವು ಸ್ಥಳಗಳ ವಿಶೇಷತೆಗಳು


  1. ಬೀದರ್ - ಬಿದರಿ ಕಲೆ
  2. ಶಹಾಬಾದ - ಕಲ್ಲುಗಳು
  3. ಕೊಡಗು  - ಕಿತ್ತಳೆ
  4. ಹಾವೇರಿ - ಏಲಕ್ಕಿ ಹಾರ
  5. ಮೈಸೂರು - ಚಿಗುರೆಲೆ
  6. ಮುಧೋಳ - ನಾಯಿಗಳು
  7. ಕಿನ್ನಾಳ - ಕಲಾತ್ಮಕ ಗೊಂಬೆಗಳು
  8. ಇಳಕಲ್ - ಸೀರೆ
  9. ಗುಳೇದಗುಡ್ಡ - ಖಣ
  10. ಧಾರವಾಡ - ಪೇಡಾ
  11. ದೇವನಹಳ್ಳಿ- ಚಕ್ಕೋತ
  12. ನಂಜನಗೂಡು- ಬಾಳೆಹಣ್ಣು
  13. ಸವಣೂರು - ಖಾರಾ
  14. ಮೊಳಕಾಲ್ಮುರು- ಸೀರೆಗಳು
  15. ಮಂಗಳೂರು- ಹೆಂಚುಗಳು
  16. ಗೋಕಾಕ್ - ಕರದಂಟು
  17. ಹಡಗಲಿ - ಮಲ್ಲಿಗೆ ಹೂ
  18. ಕಲಘಟಗಿ - ಮರದ ತೊಟ್ಟಿಲು
  19. ಚನ್ನಪಟ್ಟಣದ ಗೊಂಬೆಗಳು
  20. ಬೆಳಗಾವಿ - ಕುಂದಾ
  21. ಅಮೀನಗಡ - ಕರದಂಟು
  22. ಬ್ಯಾಡಗೀ - ಮೆಣಸಿನಕಾಯಿ
  23. ಕೊಡಗು - ಹಸಿರು ಏಲಕ್ಕಿ
  24. ಬನ್ನೂರು - ಕುರಿಗಳು
  25. ದಾವಣಗೇರೆ - ಬೆಣ್ಣೆ ದೋಸೆ
  26. ಚಿಕ್ಕಮಂಗಳೂರು - ಕಾಫಿ
  27. ಮೈಸೂರು- ಮಲ್ಲಿಗೆ

ಕನ್ನಡ ಸಂಧಿಗಳು

ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ

೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ

೧. ಲೋಪ ಸಂಧಿ:-
ಪೂರ್ವ ಪದದ ಕೊನೆಯ ಸ್ವರದ ಮುಂದೆ ಉತ್ತರ ಪದದ ಮೊದಲ ಸ್ವರ ಬಂದು ಸಂಧಿಕಾರ್ಯ ನಡೆದಾಗ ಪೂರ್ವ ಪದದ ಒಂದಕ್ಷರ ಲೋಪವಾಗುವುದಕ್ಕೆ "ಲೋಪಸಂಧಿ" ಎನ್ನುವರು.

ಉದಾಹರಣೆಗೆ:- 
೧. ಮೇಲೆ+ಇಟ್ಟು = ಮೇಲಿಟ್ಟು
ಮೇಲಿನ ಸಂಧಿಕಾರ್ಯದಲ್ಲಿ ಮೇಲೆ ಎಂಬ ಪೂರ್ವಪದದ ಕೊನೆಯ ಸ್ವರ ಎ ಎಂಬುದು ಇಲ್ಲಿ ಲೋಪವಾಗಿದೆ.

೨. ಮಾತು+ಇಲ್ಲ = ಮಾತಿಲ್ಲ
ಇಲ್ಲಿ ಮಾತು ಎಂಬ ಪೂರ್ವಪದದ ಕೊನೆಯ ಸ್ವರ ಉ ಎಂಬುದು ಲೋಪವಾಗಿದೆ. 

ಇನ್ನು ಕೆಲವು ಉದಾಹರಣೆಗಳು
ನಾನು+ಒಬ್ಬ = ನಾನೊಬ್ಬ.             : ಉ ಸ್ವರ ಲೋಪವಾಗಿದೆ.
ಹುಡುಗರು+ಎಲ್ಲ = ಹುಡುಗರೆಲ್ಲ.   : ಉ ಸ್ವರ ಲೋಪವಾಗಿದೆ.
ನಿನಗೆ +ಅಲ್ಲದೆ = ನಿನಗಲ್ಲದೆ.         : ಎ ಸ್ವರ ಲೋಪವಾಗಿದೆ.

೨. ಆಗಮ ಸಂಧಿ:-
ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯಾ ನಡೆಯುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮ ಸಂಧಿ ಎನ್ನುವರು. ಸಾಮಾನ್ಯವಾಗಿ ವ (ವ್+ಅ) ಇಲ್ಲವೇ ಯ (+ಅ) ಅಕ್ಷರಗಳು ಆಗಮವಾಗಿ ಬರುತ್ತವೆ.

ಉದಾಹರಣೆಗೆ:-
೧. ಮನೆ+ಅನ್ನು = ಮನೆಯನ್ನು
ಈ ಪದದಲ್ಲಿ ಉತ್ತರ ಪದದ ಅ ಸ್ವರದ ಬದಲು ಸಂಧಿಕಾರ್ಯದ ನಂತರ ಯ ಎಂಬ ಅಕ್ಷರ ಸೇರಿಕೊಂಡಿದೆ.
೨. ಪತ್ರ+ಅನ್ನು = ಪತ್ರವನ್ನು
ಈ ಪದದಲ್ಲಿ ಅ ಸ್ವರದ ಬದಲು ವ ಎಂಬ ಅಕ್ಷರ ಬಂದು ಸೇರಿಕೊಂಡಿದೆ.

ಇನ್ನು ಕೆಲವು ಉದಾಹರಣೆಗಳು
ಮಗು+ಅನ್ನು = ಮಗುವನ್ನು      : ವ ಆಗಮವಾಗಿದೆ.
ಮಳೆ+ಅಲ್ಲಿ = ಮಳೆಯಲ್ಲಿ         : ಯ ಆಗಮವಾಗಿದೆ.

೩. ಆದೇಶ ಸಂಧಿ:-
ಇಲ್ಲಿ ಸಂಧಿ ಕಾರ್ಯ ನಡೆದಾಗ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ, ತ,ಪ ವ್ಯಂಜನಾಕ್ಷರಗಳಿಗೆ ಬದಲಾಗಿ ಕ್ರಮವಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ "ಆದೇಶ ಸಂಧಿ" ಎನ್ನುವರು.

ಉದಾಹರಣೆಗೆ:-
೧. ಕೋಪ+ಕೊಂಡು = ಕೋಪಗೊಂಡು
ಮೇಲಿನ ಸಂಧಿ ಕಾರ್ಯದಲ್ಲಿ ಕೊಂಡು ಎಂಬ ಕ (ಕೊ) ಅಕ್ಷರದ ಬದಲಿಗೆ ಕೋಪಗೊಂಡು ಎಂಬ ಪದದಲ್ಲಿ ಗ(ಗೊ) ಎಂಬ ಅಕ್ಷರ ಬಂದಿದೆ.
೨. ಬೆಟ್ಟ+ತಾವರೆ = ಬೆಟ್ಟದಾವರೆ
ಇಲ್ಲಿ ಸಂಧಿ ಕಾರ್ಯ ನಡೆಯುವಾಗ ತ(ತಾ) ಅಕ್ಷರದ ಬದಲಿಗೆ ದ(ದಾ) ಅಕ್ಷರ ಬಂದಿದೆ.

ಇನ್ನು ಕೆಲವು ಉದಾಹರಣೆಗಳು
ಕಣ್+ಪನಿ = ಕಂಬನಿ    : ಪ ಬದಲು ಬ ಆದೇಶವಾಗಿ ಬಂದಿದೆ.
ಹೂ+ತೋಟ = ಹೂದೋಟ : ತ ಬದಲು ದ ಆದೇಶವಾಗಿ ಬಂದಿದೆ.

ಸಂಧಿಗಳು


     ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿ ಬಿಡಿಯಾಗಿ ಹೇಳುವುದಿಲ್ಲ. ಉದಾಹರಣೆಗೆ ಅವಳು+ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ "ಅವಳಲ್ಲಿ" ಎಂದು ಹೇಳುತ್ತೇವೆ. ಹೀಗೆ ಎರಡು ಅಕ್ಷರಗಳು ಯಾವ ಕಾಲ ವಿಳಂಬವಿಲ್ಲದೆ ಪರಸ್ಪರ ಸೇರುವುದಕ್ಕೆ ಸಂಧಿ ಎನ್ನುತ್ತೇವೆ.

ಉದಾಹರಣೆಗೆ:-
ಮಳೆ+ಕಾಲ = ಮಳೆಗಾಲ
ಪರ+ಉಪಕಾರಿ = ಪರೋಪಕಾರಿ
ಬಿಲ್ವ+ಪತ್ರೆ = ಬಿಲ್ಪತ್ರೆ

ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದ ದ ಅಂತ್ಯದಲ್ಲಿ ಉತ್ತರ ಪದದ ಆದಿಯಲ್ಲಿ ಮೂರು ಬಗೆಯ ಕಾರ್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂದು ಆಗಮಿಸಬಹುದು, ಒಂದು ಅಕ್ಷರ ಹೋಗಿ ಇನ್ನೊಂದು ಅದರ ಸ್ಥಾನದಲ್ಲಿ ಬೇರೆಯೇ ಬರಬಹುದು. ಇದನ್ನು ಸಂಧಿಕಾರ್ಯ ಎನ್ನುತ್ತಾರೆ.

ಸಂಧಿಗಳಲ್ಲಿ ಎರಡು ವಿಧಗಳಿವೆ.
೧. ಕನ್ನಡ ಸಂಧಿ
೨. ಸಂಸ್ಕೃತ ಸಂಧಿ

೧. ಕನ್ನಡ ಸಂಧಿಗಳು:-

ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ
೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ

ಸಂಧಿಗಳ ಬಗ್ಗೆ ಮುಂದಿನ ಪಾಠಕ್ಕಾಗಿ ಈ ಮುಂದಿನ ಲಿಂಕಗಳನ್ನು ಕ್ಲಿಕ್ ಮಾಡಿ



ಸಾಮಾನ್ಯ ಜ್ಞಾನ

1. ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
- ನವ ಮಂಗಳೂರು.

2. ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.

3. "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು"  ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

4. ವಿಧಾನ ಸೌಧವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.

5. ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.

6. ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರು

7. ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

8. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.

9.  ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.

10. ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್ ಯಾರು?
- ನಾಲ್ವಡಿ ಕೃಷ್ಣರಾಜ ಒಡೆಯರ್.