ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವುದು ಬುದ್ಧಿವಂತಿಕೆಯ ಮಹತ್ವವನ್ನು ತಿಳಿಸುವ ಗಾದೆಮಾತಾಗಿದೆ.  ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು  ಸಮಸ್ಯೆಗಳು ಅಥವಾ ಅನೇಕ ರೀತಿಯ ಸಂಕಟದ ಪರಿಸ್ಥಿತಿಗಳು ಎದುರಾಗುತ್ತವೆ. ಈ ಗಾದೆಮಾತು,  ಉಪಾಯ ಗೊತ್ತಿದ್ದವನಿಗೆ ಅಪಾಯ ಬರುವುದೇ ಇಲ್ಲ ಎಂದು ಹೇಳುವುದಿಲ್ಲ. ಮನುಷ್ಯನೆಂದ ಮೇಲೆ ಸಮಸ್ಯೆಗಳು, ಅಪಾಯಗಳು ಇದ್ದದ್ದೇ. ಆದರೆ ಅವುಗಳನ್ನು ಉಪಾಯವಾಗಿ ನಿಭಾಯಿಸುವುದನ್ನು ಕಲಿಯಬೇಕು. ಹೀಗೆ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿರ್ವಹಿಸುವುದರಿಂದ ಅವುಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದೆನ್ನುವುದು ನಿಜ.  ಎಷ್ಟೋ ಸಾರಿ ಉಪಾಯ ಮತ್ತು ಮುಂದಾಲೋಚನೆಯಿಂದ ನಡೆದುಕೊಂಡರೆ ಮುಂದೆ ಬರುವ ಅಪಾಯಗಳನ್ನೂ  ತಡೆಗಟ್ಟಬಹುದು. ಶಕ್ತಿಯಿಂದ ಅಥವಾ ಬಲಪ್ರಯೋಗದಿಂದ ಕೂಡ ಆಗದ ಕೆಲಸಗಳನ್ನು ಜಾಣತನದಿಂದ  ಸುಲಭವಾಗಿ ಮಾಡಬಹುದು.  

ಹೀಗೆ ಸಮಸ್ಯೆಗಳು ಎದುರಾದಾಗ ಬುದ್ಧಿವಂತ ವ್ಯಕ್ತಿಗಳು ಅದರಿಂದ ಗಾಬರಿಗೆ ಒಳಗಾಗುವುದಿಲ್ಲ. ಅವರು ಅನಗತ್ಯ ಒತ್ತಡಕ್ಕೆ ಸಿಲುಕಿ ವಿಷಮ ಪರಿಸ್ಥಿತಿಯಿಂದ ಹೊರಬರಲು ಆತುರ ಪಡುವುದಿಲ್ಲ.ಅದರ ಬದಲು ಅವರು ಜಾಣತನದಿಂದ ಹಾಗೂ ಸಮಾಧಾನ ಚಿತ್ತದಿಂದ   ಪರಿಹಾರ  ಮಾರ್ಗವನ್ನು ಕಂಡುಕೊಳ್ಳುತ್ತಾರೆ.  ಮನುಷ್ಯನು ತನ್ನ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ, ಶಾಂತವಾದ ಮನಸ್ಸಿನಿಂದ ಯೋಚಿಸಿದರೆ ಯಾವುದೇ ಸಮಸ್ಯೆ ಇರಲಿ ಬಗೆ ಹರಿಯದೆ ಇರದು.

ಪರಿಸರದ ಸಂರಕ್ಷಣೆ

ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಇರುವ ವಾತಾವರಣ ಉದಾಹರಣೆಗೆ  ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ, ಪಶು ಪಕ್ಷಿಗು ಇತ್ಯಾದಿ.  ಮಾನವನೂ ಸಹ ಇದೆ ಪರಿಸರದ ಒಂದು ಭಾಗ. ಇನ್ನು ಪರಿಸರ ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಪರಿಸರ ಮಾಲಿನ್ಯಕ್ಕೆ ನೈಸರ್ಗಿಕ ಕಾರಣಗಳೂ ಇವೆ ಮತ್ತು ಮಾನವ ನಿರ್ಮಿತ ಕಾರಣಗಳೂ ಇವೆ.   

ಮಾನವ  ಪ್ರತಿಯೊಂದಕ್ಕೂ ಪ್ರಕೃತಿಯನ್ನೇ ಅವಲಂಬಿಸಿದ್ದಾನೆ. ನಾವು ನಮ್ಮ ದಿನನಿತ್ಯದ ಅಗತ್ಯಗಳಾದ ಆಹಾರ, ಬಟ್ಟೆ, ಗಾಳಿ, ಬೆಳಕು, ಔಷಧ ಮುಂತಾದ ಜೀವನಾವಶ್ಯಕ ಸಕಲ ಸೌಕರ್ಯಗಳಿಗೂ ಪ್ರಕೃತಿಯೇ ಜೀವನಾಧಾರವಾಗಿದೆ. ಮಾನವರಾದ ನಾವು ನಮ್ಮ ಅಜ್ಞಾನ, ದುರಾಸೆ, ದುಂದುಗಾರಿಕೆ ಹಾಗೂ ಮೋಜುಮಸ್ತಿಗಳಿಗಾಗಿ ಇಂತಹ ಅಮೂಲ್ಯವಾದ ಪರಿಸರವನ್ನು ನಾಶ ಮಾಡಿದರೆ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಈ ಸುಂದರ ಪರಿಸರದ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ

  1. ಆಧುನಿಕ ಕೈಗಾರಿಕಾ ಸ್ಥಾವರದ ರಚನಾ ವಿನ್ಯಾಸದಲ್ಲಿ ಕಶ್ಮಲ ಕಳೆಯುವುದು ತುಂಬ ಮುಖ್ಯವಾದುದು. ಘನಪದಾರ್ಥಗಳಲ್ಲಿ ತೇಲುವಂಥವು, ಯಾಂತ್ರಿಕವಾಗಿ ಪ್ರತ್ಯೇಕಿಸಬೇಕು, ಮುಳುಗುವಂಥದನ್ನು ವಿಶಿಷ್ಟ ಕೋಶಗಳಲ್ಲಿ ಕೆಳಗಿಳಿಸಿ ಬೇರ್ಪಡಿಸಬೇಕು. ಕೈಗಾರಿಕಾ ಕಶ್ಮಲದ ದುಷ್ಪರಿಣಾಮಗಳ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯ
  2. ಅರಣ್ಯಗಳು ಜನರ ಶ್ವಾಸಕೋಶಗಳು. ಇವುಗಳು ಊನವಾದರೆ ಜನರ ಜೀವನ ದುಸ್ಸಾಹಸವೇ ಸರಿ. ಆದುದರಿಂದ ಅವುಗಳ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯನಾಶವನ್ನು ತಡೆಗಟ್ಟಬೇಕು
  3. ವನಮಹೋತ್ಸವದ ಮೂಲಕ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಅರಣ್ಯ ರಕ್ಷಣೆ ಮಾಡಿ ಇಡೀ ಜಗತ್ತನ್ನು ಅಪಾಯದಿಂದ ಮಾಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  4. ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.
  5. ನಮ್ಮ ಮನೆಯ  ಸುತ್ತಮುತ್ತಲಿನ ಜಾಗವನ್ನು ಸ್ವಚ್ಚವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನೆಯ ಹಿಂದೆ ಮುಂದೆ ಜಾಗವಿದ್ದರೆ ಕೈ ತೋಟ ಮಾಡುವುದುಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು.
  6. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳು ಹರಡುವುದನ್ನು ತಡೆಗಟ್ಟಬಹುದು.

ಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರು ಕಾಡುಗಳನ್ನು, ಶುದ್ಧವಾದ ಗಾಳಿ, ನೀರನ್ನು ಹೊಂದಿರಬೇಕೆಂದರೆ ನಾವು ನಮ್ಮ ಪರಿಸರವನ್ನು ರಕ್ಷಿಸಿ ಕೊಳ್ಳಬೇಕು. ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ ಇರಬೇಕು.

 

ಶಕ್ತಿಗಿಂತ ಯುಕ್ತಿ ಮೇಲು

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆ ಇಂದಲ್ಲ, ಅಂದಿನ ಕಾಲದಿಂದಲೂ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಬೆಳೆದುಕೊಂದು ಬಂದಿದೆ. ಇವು ಚಿಕ್ಕ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ ನುಡಿಮುತ್ತುಗಳಾಗಿವೆ. ಅದು ಜೀವನ ಅನುಭವಕ್ಕೆ ಹಿಡಿದ ಕೈಗನ್ನಡಿ. ಆದ್ದರಿಂದ ಗಾದೆಗಳು ಸತ್ಯಕ್ಕೆ ಹತ್ತಿರವಾಗಿವೆ. ಇಂದು ದೇಶ ವಿದೇಶಗಳಲ್ಲಿಯೂ ಸಹ ಹೆಚ್ಚು ಪ್ರಚಲಿತವಾಗಿ ಬೆಳೆದುಕೊಂಡು ಬಂದಿದೆ.

ಶಕ್ತಿಯಿಂದ ಸಾಧಿಸಲು ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆ ಸೃಷ್ಟಿಯಾಗಿದೆ. ಶಕ್ತಿಯಿಂದ ಎಲ್ಲಾ ಕೆಲಸಗಳನ್ನು ಸಾಧಿಸಲು ಸಾಧ್ಯವಿಲ್ಲ. ಶಕ್ತಿಯಿಂದ ಸಾಧಿಸಲಾಗದ ಕೆಲಸವನ್ನು ಯುಕ್ತಿಯಿಂದ ಸಾಧಿಸಬೇಕು. ಸಂದರ್ಭೋಚಿತ ಉಪಾಯದಿಂದ ಎಂತಹ ಶತ್ರುವನ್ನಾದರೂ ಸೋಲಿಸಬಹುದು. ಅಪಾಯ ಬಂದಾಗ ಉಪಾಯದಿಂದ ಪಾರಾಗಬೇಕು. ಉದಾಹರಣೆಗೆ ಒಂದು ಪುಟ್ಟ ಮೊಲದ ಕತೆ ಇಲ್ಲಿ ಹೇಳಬಹುದು. ಒಂದು ಪುಟ್ಟ ಮೊಲ ಸಿಂಹಕ್ಕೆ ಆಹಾರವಾಗಲು ಹೊರಟಿತ್ತು. ಅದು ಆಟವಾಡಿಕೊಂಡು ಸಮಯಕ್ಕಿಂತ ತಡವಾಗಿ ಸಿಂಹದ ಬಳಿ ಬಂದಿತು. ಹಸಿವಿನಿಂದ ಕ್ರೋಧಗೊಂಡಿದ್ದ ಸಿಂಹ ಮೊಲವನ್ನು ನೋಡಿದ ತಕ್ಷಣ ತಿನ್ನಲು ಹಾರಿತು. ಆಗ ಮೊಲ ತನ್ನನ್ನು ಇನ್ನೊಂದು ಬಲವಾದ ಸಿಂಹ ತಡೆಯಿತೆಂದೂ ಕತೆ ಕಟ್ಟಿ ಹೇಳಿತು. ಅದನ್ನು ನಂಬಿದ ಸಿಂಹ ಮೊಲವನ್ನು ಇನ್ನೊಂದು ಸಿಂಹದ ಬಳಿ ಕರೆದೊಯ್ಯಲು ಹೇಳಿತು. ಆಗ ಮೊಲ ಸಿಂಹವನ್ನು ಬಾವಿಯ ಬಳಿ ಕರೆದುಕೊಂಡು ಬಂದಿತು. ಒಳಗೆ ನೋಡಿ ಘರ್ಜಿಸಿದ ಸಿಂಹಕ್ಕೆ ತನ್ನ ಧ್ವನಿಯೇ ಪ್ರತಿಧ್ವನಿಯಾಗಿ ದೊಡ್ಡ ಧ್ವನಿಯಲ್ಲಿ ಕೇಳಿಸಿತು. ಕ್ರೋಧಗೊಂಡ ಸಿಂಹ ಬಾವಿಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿತು. ಹೀಗೆ ಮೊಲ ತನ್ನ ಹಾಗೂ ಕಾಡಿನ ಬೇರೆ ಪ್ರಾಣಿಗಳ ಜೀವ ಕೂಡಾ ಉಳಿಸಿತು.

ಹಾಗೆಯೇ ಬುದ್ಧಿವಂತಿಕೆಯಲ್ಲಿ ಹೆಸರು ಮಾಡಿದ ತೆನಾಲಿ ರಾಮಕೃಷ್ಣನ ಹೆಸರನ್ನು ಕೇಳದವರಾರು? ಬೇರೆ ಪಂಡಿತರನ್ನು ವಾದದಲ್ಲಿ ಗೆದ್ದು ಬಂದ ಒಬ್ಬ ಮಹಾನ್ ಪಂಡಿತನನ್ನು ತಿಲಕಾಷ್ಟ ಮಹಿಷ ಬಂಧನ ಎಂಬ ಗ್ರಂಥವಿದೆ ಎಂದು ನಂಬಿಸಿ ಅವನನ್ನು ಯುಕ್ತಿಯಿಂದ ಸೋಲಿಸಿ ತನ್ನ ರಾಜ್ಯದ ಮರ್ಯಾದೆ ಉಳಿಸಿದ ಕತೆ ಎಲ್ಲರಿಗೂ ತಿಳಿದದ್ದೇ. ಹಾಗೆಯೇ ಬೀರಬಲ್ ಎಂಬ ಚತುರ ಮಂತ್ರಿ ಅಕ್ಬರ್ ಆಸ್ಥಾನದಲ್ಲಿ ದೊಡ್ಡ ಮಟ್ಟದ ಸ್ಥಾನವನ್ನು ಪಡೆದದ್ದು ಅವನ ಬುದ್ಧಿವಂತಿಕೆಯಿಂದಲೇ. ಇಂತಹ ಹಲವಾರು ಪ್ರಸಂಗಗಳು ನಮಗೆ ನಮ್ಮ ಸುತ್ತಲೂ ಕಾಣಸಿಗುತ್ತವೆ.

ಗಾದೆಯು ಚತುರನ ಯುಕ್ತಿಯು ಸಾವಿರಾರು ತೋಳ್ಬಲವನ್ನು ಸೋಲಿಸಬಹುದೆಂದು ಹೇಳಿದೆ. ಹೀಗೆ ಶಕ್ತಿಯಿಂದ ಸಾಧ್ಯವಾಗದ್ದನ್ನು ಯುಕ್ತಿಯಿಂದ ಸಾಧಿಸಬಹುದು ಎಂಬುದನ್ನು ಗಾದೆ ಮಾತು ನಿರೂಪಿಸಿದೆ.