ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ


ಒಬ್ಬ ಕುಂಬಾರ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು. ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು. ಇಲ್ಲವಾದಲ್ಲಿ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ. ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು. 

ಈ ಗಾದೆಯಿಂದ ನಾವು ತಿಳಿದುಕೊಳ್ಳುವ ಅಂಶವೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

- ಸೀಮಾ ಕಂಚಿಬೈಲು