ಸಂಸ್ಕೃತ ಸಂಧಿಗಳು – ಸ್ವರ ಸಂಧಿಗಳ ಸಂಪೂರ್ಣ ವಿವರಣೆ

ಪರಿಚಯ

ಭಾಷೆಯಲ್ಲಿ ಪದಗಳ ಸಂಯೋಜನೆ ಬಹಳ ಮಹತ್ವದ್ದಾಗಿದೆ. ವಿಶೇಷವಾಗಿ ಸಂಸ್ಕೃತ ಭಾಷೆಯಲ್ಲಿ, ಎರಡು ಪದಗಳು ಸೇರಿ ಹೊಸ ರೂಪ ಪಡೆಯುವ ಪ್ರಕ್ರಿಯೆಯನ್ನು ಸಂಧಿ ಎಂದು ಕರೆಯಲಾಗುತ್ತದೆ.
ಈ ಸಂಧಿ ನಿಯಮಗಳು ಕನ್ನಡ ವ್ಯಾಕರಣದಲ್ಲಿಯೂ ಬಹಳ ಮುಖ್ಯವಾಗಿದ್ದು, ಶಾಲಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ.

ಪರಿಭಾಷೆ:
ಪೂರ್ವಪದ ಮತ್ತು ಉತ್ತರಪದ ಎರಡೂ ಸಂಸ್ಕೃತ ಪದಗಳಾಗಿದ್ದು, ಅವು ಪರಸ್ಪರ ಸೇರಿ ರೂಪ ಬದಲಾದರೆ ಅದನ್ನು ಸಂಸ್ಕೃತ ಸಂಧಿ ಎಂದು ಕರೆಯುತ್ತಾರೆ.


ಸಂಸ್ಕೃತ ಸಂಧಿಗಳ ಪ್ರಕಾರಗಳು

ಸಂಸ್ಕೃತ ಸಂಧಿಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ:

  1. ಸ್ವರ ಸಂಧಿಗಳು
  2. ವ್ಯಂಜನ ಸಂಧಿಗಳು

ಇಲ್ಲಿ ಮುಖ್ಯವಾಗಿ ಸ್ವರ ಸಂಧಿಗಳ ಪ್ರಮುಖ ವಿಧಗಳನ್ನು ವಿವರವಾಗಿ ತಿಳಿದುಕೊಳ್ಳೋಣ.


ಸವರ್ಣ ದೀರ್ಘ ಸಂಧಿ 

 ವ್ಯಾಖ್ಯಾನ

ಪೂರ್ವಪದದ ಕೊನೆಯ ಸ್ವರ ಮತ್ತು ಉತ್ತರಪದದ ಮೊದಲ ಸ್ವರ ಒಂದೇ ಜಾತಿಗೆ ಸೇರಿದ ಸ್ವರಗಳಾಗಿದ್ದರೆ, ಅವು ಸೇರಿ ದೀರ್ಘ ಸ್ವರವಾಗುವ ಪ್ರಕ್ರಿಯೆಯನ್ನು ಸವರ್ಣ ದೀರ್ಘ ಸಂಧಿ ಎಂದು ಕರೆಯುತ್ತಾರೆ.

 ನಿಯಮಗಳು :
ಅ + ಅ = ಆ
ಇ + ಇ = ಈ
ಉ + ಉ = ಊ

📌 ಪ್ರಮುಖ ಅಂಶಗಳು

  • ಎರಡೂ ಪದಗಳು ಸಂಸ್ಕೃತ ಪದಗಳಾಗಿರಬೇಕು
  • ಸ್ವರಗಳು ಒಂದೇ ವರ್ಗಕ್ಕೆ ಸೇರಿದಿರಬೇಕು
  • ಫಲವಾಗಿ ದೀರ್ಘ ಸ್ವರ ಉಂಟಾಗುತ್ತದೆ

 ಉದಾಹರಣೆಗಳು

  1. ಮಹಾ + ಆತ್ಮ = ಮಹಾತ್ಮ (ಆ + ಆ = ಆ)
  2. ದೇವ + ಆಲಯ = ದೇವಾಲಯ (ಅ + ಆ = ಆ)
  3. ಗಿರಿ + ಈಶ = ಗಿರೀಶ (ಇ + ಈ = ಈ)
  4. ಗುರು + ಉಪದೇಶ = ಗುರೂಪದೇಶ (ಉ + ಉ = ಊ)
  5. ರವಿ + ಇಂದ್ರ = ರವೀಂದ್ರ (ಇ + ಇ = ಈ)

 ಗುಣ ಸಂಧಿ

ವ್ಯಾಖ್ಯಾನ

ಪೂರ್ವಪದದ ಕೊನೆಯಲ್ಲಿ ಅ / ಆ ಇದ್ದು, ಉತ್ತರಪದದ ಆರಂಭದಲ್ಲಿ

  • ಇ / ಈ ಬಂದರೆ
  • ಉ / ಊ ಬಂದರೆ
  • ಋ ಬಂದರೆ ಅರ್

ಹೀಗೆ ರೂಪಾಂತರವಾದರೆ ಅದನ್ನು ಗುಣ ಸಂಧಿ ಎನ್ನುತ್ತಾರೆ.

ನಿಯಮಗಳು

  • ಅ/ಆ + ಇ = ಏ
  • ಅ /ಆ+ ಉ = ಓ
  • ಅ /ಆ+ ಋ = ಅರ್

ಉದಾಹರಣೆಗಳು

  1. ಮಹಾ + ಈಶ = ಮಹೇಶ (ಆ + ಈ = ಏ)
  2. ಸೂರ್ಯ + ಉದಯ = ಸೂರ್ಯೋದಯ (ಅ + ಉ = ಓ)
  3. ಬ್ರಹ್ಮ + ಋಷಿ = ಬ್ರಹ್ಮರ್ಷಿ (ಅ + ಋ = ಅರ್)
  4. ಮಹಾ + ಉನ್ನತಿ = ಮಹೋನ್ನತಿ (ಆ + ಉ = ಓ)
  5. ಸುರ + ಇಂದ್ರ = ಸುರೇಂದ್ರ (ಅ + ಇ = ಏ)

 ವೃದ್ಧಿ ಸಂಧಿ 

 ವ್ಯಾಖ್ಯಾನ

ಪೂರ್ವಪದದ ಕೊನೆಯಲ್ಲಿ ಅ / ಆ ಇದ್ದು, ಉತ್ತರಪದದ ಆರಂಭದಲ್ಲಿ

  • ಏ / ಐ ಬಂದರೆ
  • ಓ / ಔ ಬಂದರೆ

ಹೀಗೆ ಬದಲಾದರೆ ಅದನ್ನು ವೃದ್ಧಿ ಸಂಧಿ ಎಂದು ಕರೆಯುತ್ತಾರೆ.

ನಿಯಮಗಳು

  • ಅ /ಆ+ ಏ = ಐ
  • ಅ /ಆ+ ಐ = ಐ
  • ಅ/ಆ + ಓ = ಔ
  • ಅ /ಆ+ ಔ = ಔ

 ಉದಾಹರಣೆಗಳು

  1. ಏಕ + ಏಕ = ಏಕೈಕ (ಅ + ಏ = ಐ)
  2. ಶಿವ + ಐಕ್ಯ = ಶಿವೈಕ್ಯ (ಅ + ಐ = ಐ)
  3. ಮಹಾ + ಔಚಿತ್ಯ = ಮಹೌಚಿತ್ಯ (ಅ + ಔ = ಔ)
  4. ವನ + ಔಷಧ = ವನೌಷಧ (ಅ + ಔ = ಔ)

ಯಣ್ ಸಂಧಿ 

 ವ್ಯಾಖ್ಯಾನ

ಪೂರ್ವಪದದ ಕೊನೆಯಲ್ಲಿ ಇರುವ , , , , ಸ್ವರಗಳಿಗೆ ನಂತರ ಸವರ್ಣವಲ್ಲದ ಸ್ವರ ಬಂದಾಗ ಮಧ್ಯದಲ್ಲಿ ಯ್, ವ್, ರ್ ಆಗಿ ಬದಲಾಗುತ್ತದೆ. ಇದನ್ನು ಯಣ್ ಸಂಧಿ ಎಂದು ಕರೆಯುತ್ತಾರೆ.

ನಿಯಮಗಳು

  • ಇ / ಈ ಯ್
  • ಉ / ಊ ವ್
  • ರ್

ಉದಾಹರಣೆಗಳು

  1. ಪ್ರತಿ + ಉಪಕಾರ = ಪ್ರತ್ಯುಪಕಾರ (ಇ + ಉ = ಯ)
  2. ಇತಿ + ಆದಿ = ಇತ್ಯಾದಿ (ಇ + ಆ = ಯ)
  3. ಮನು + ಅಂತರ = ಮನ್ವಂತರ (ಉ + ಅ = ವ)
  4. ಗುರು + ಆಜ್ಞೆ = ಗುರ್ವಾಜ್ಞೆ (ಉ + ಆ = ವ)
  5. ಪಿತೃ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ)

ಪರೀಕ್ಷೆಗೆ ಮುಖ್ಯ ಅಂಶಗಳು

ಸಂಧಿಯ ವ್ಯಾಖ್ಯಾನ  ನೆನಪಿಡಿ ಹಾಗೂ ತಪ್ಪಿಲ್ಲದಂತೆ  ಬರೆಯಲು ಕಲಿಯಿರಿ
 ಬರೆಯುವಾಗ ಪ್ರತಿ ಸಂಧಿಯ ನಿಯಮ  + ಉದಾಹರಣೆ ಕಡ್ಡಾಯ
ಸ್ವರ ಬದಲಾವಣೆಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ
ಸವರ್ಣ, ಗುಣ, ವೃದ್ಧಿ, ಯಣ್ – ನಾಲ್ಕನ್ನೂ ಬೇರ್ಪಡಿಸಿ ನೆನಪಿಡಿ

ಸಂಸ್ಕೃತ ಸಂಧಿಗಳು ಭಾಷೆಯ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ.
ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವ್ಯಾಕರಣದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು ಮತ್ತು ಬರವಣಿಗೆಯಲ್ಲಿಯೂ ನೈಪುಣ್ಯ ಹೆಚ್ಚುತ್ತದೆ

 

ವರ್ಷದ ಆರಂಭದಿಂದಲೇ ಪರೀಕ್ಷೆಗೆ ತಯಾರಿ ಹೇಗೆ? ಕೆಲವು ಸರಳ ಸಲಹೆಗಳು

 

ಇನ್ನೇನು ಮತ್ತೊಂದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಕೆಲವರು ಹಿಂದಿನ ವರ್ಷ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮುಂದೆ ಸಾಗಿದರೆ, ಇನ್ನೂ ಕೆಲವರಿಗೆ ಕಳೆದ ವರ್ಷ ಸರಿಯಾಗಿ ಓದಲಿಲ್ಲ ಅಥವಾ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ ಅಂಬ ಹಳಹಳಿ ಇದೆ. ಉತ್ತಮ ಫಲಿತಾಂಶಕ್ಕಾಗಿ, ಕೊನೆಯ ಕ್ಷಣದಲ್ಲಿ ಓದುವುದಕ್ಕಿಂತ ವರ್ಷದ ಆರಂಭದಿಂದಲೇ ಸರಿಯಾದ ಯೋಜನೆಯೊಂದಿಗೆ ತಯಾರಿ ಮಾಡುವುದು ಅತ್ಯಂತ ಮುಖ್ಯ. ಇದರಿಂದ ಒತ್ತಡ ಕಡಿಮೆ ಆಗುತ್ತದೆ ಮತ್ತು ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲವು  ಮುಖ್ಯ ಸಲಹೆಗಳು ನೀಡಲಾಗಿದೆ.

 

 ಸ್ಪಷ್ಟವಾದ ಅಧ್ಯಯನ ಯೋಜನೆ ರೂಪಿಸಿರಿ

ವರ್ಷದ ಆರಂಭದಲ್ಲೇ ಪ್ರತಿಯೊಂದು ವಿಷಯಕ್ಕೂ ಸಮಯ ಹಂಚಿಕೆ ಮಾಡಿ. ಕಠಿಣವಾದ ವಿಷಯಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಿ. ದಿನವೂ 2–3 ವಿಷಯಗಳನ್ನು ಓದುವಂತೆ ಯೋಜನೆ ಮಾಡಿಕೊಳ್ಳಿ. ಯೋಜನೆ ಮಾಡುವಾಗ ತುಂಬಾ ಕಠಿಣವಾದ ವೇಳಾಪಟ್ಟಿ ಬೇಡ. ಅದರಲ್ಲಿ ಮನರಂಜನೆಗೆ ಅಥವಾ ಆಟೋಟಗಳಿಗೂ ಸಮಯವಿರಲಿ. ತುಂಬಾ ಕಠಿಣವಾದ ವೇಳಾಪಟ್ಟಿಯನ್ನು ಪಾಲಿಸಲಾಗದೇ ಕೊನೆಗೆ ನಿಮ್ಮ  ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು.  ವಾರದ ಕೊನೆಯಲ್ಲಿ ಓದಿದ ವಿಷಯಗಳನ್ನು ಮರುಪರಿಶೀಲನೆ (revision) ಮಾಡುವುದು ಮುಖ್ಯ.  ಈ ರೀತಿಯ ಯೋಜನೆ ನಿಮಗೆ ನಿಯಮಿತ ಅಭ್ಯಾಸವನ್ನು ನೀಡುತ್ತದೆ.

ದಿನನಿತ್ಯ ಅಭ್ಯಾಸ ಮತ್ತು ಟಿಪ್ಪಣಿಗಳು

ಪ್ರತಿ ಪಾಠವನ್ನು ಓದಿದ ನಂತರ, ಮುಖ್ಯ ಅಂಶಗಳನ್ನು ಒಂದು ಪ್ರತ್ಯೇಕ ಪುಸ್ತಕದಲ್ಲಿ ನಿಮ್ಮದೇ ಪದಗಳಲ್ಲಿ ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳಿ. ಮುಖ್ಯವಾದ ಗಣಿತ, ವಿಜ್ಞಾನದ ಸೂತ್ರಗಳು, ಇತಿಹಾಸದ ದಿನಾಂಕಗಳು, ಪ್ರಮುಖ ವ್ಯಕ್ತಿಗಳ ಹೆಸರು ಇವುಗಳನ್ನು ಅಚ್ಚುಕಟ್ಟಾಗಿ ಪಟ್ಟಿ ಮಾಡಿಟ್ಟುಕೊಳ್ಳಿ.  ಇದು ಪರೀಕ್ಷೆಯ ಸಮಯದಲ್ಲಿ ಬೇಗನೆ ಮರುಪಠಣ ಮಾಡಲು ಸಹಾಯ ಮಾಡುತ್ತದೆ. ದಿನನಿತ್ಯ 1–2 ಗಂಟೆಗಳ ನಿಯಮಿತ ಓದು ನಿಮ್ಮ ಜ್ಞಾನವನ್ನು ಗಟ್ಟಿಗೊಳಿಸುತ್ತದೆ. ಇಲ್ಲಿ ನಿಯಮಿತತೆ ತುಂಬಾ ಮುಖ್ಯವಾದುದು.

 ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿ (pattern) ತಿಳಿಯುತ್ತದೆ. ಯಾವ ವಿಷಯಗಳಿಂದ ಹಾಗೂ ಯಾವ ಮಾದರಿಯ ಪ್ರಶ್ನೆಗಳು ಹೆಚ್ಚು ಬರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ವಾರಕ್ಕೆ ಒಂದು ಬಾರಿ ಮಾದರಿ ಪರೀಕ್ಷೆ (mock test) ತೆಗೆದುಕೊಳ್ಳುವುದು ಉತ್ತಮ. ಇದರಿಂದ ಯಾವ ರೀತಿಯ ಪ್ರಶ್ನೆಗಳನ್ನು ಎದುರಿಸುವುದರಲ್ಲಿ ಎಡುವುತ್ತಿದ್ದೇವೆ ಎನ್ನುವುದು ತಿಳಿದು ಆ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಯಾವುದಾದರೂ ವಿಷಯ ಕಷ್ಟವೆನಿಸಿದರೆ ಅದನ್ನು ಆವಾಗಲೇ ತಿಳಿದುಕೊಳ್ಳಬಹುದು. ಅಂತರ್ಜಾಲದಲ್ಲಿ ಈ ರೀತಿಯ ಮಾದರಿ ಪ್ರಶ್ನೆಪತ್ರಿಕೆಗಳು ಸಿಗುತ್ತವೆ.

ಸಮಯ ನಿರ್ವಹಣೆ ಮತ್ತು ಆರೋಗ್ಯದ ಗಮನ

ಪಾಠಗಳ ಜೊತೆಗೆ ಸರಿಯಾದ ಸಮಯಕ್ಕೆ ವಿಶ್ರಾಂತಿ ಮತ್ತು ಆರೋಗ್ಯದ ಮೇಲೆ ಗಮನ ಕೊಡುವುದು ಅಷ್ಟೇ ಗಮನಾರ್ಹವಾಗಿದೆ . ಪ್ರತಿದಿನ ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಮತ್ತು ಸ್ವಲ್ಪ ವ್ಯಾಯಾಮ ಮಾಡುವುದು ಗ್ರಹಣಶಕ್ತಿ ಮತ್ತು ಏಕಾಗ್ರತೆಯನ್ನು  ಹೆಚ್ಚಿಸುತ್ತದೆ. ಓದುವ ಸಮಯವನ್ನು ಸರಿಯಾಗಿ ಹಂಚಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.

ವರ್ಷದ ಆರಂಭದಿಂದಲೇ ಸರಿಯಾದ ತಯಾರಿ ಮಾಡಿದರೆ ಪರೀಕ್ಷೆ ಸುಲಭವಾಗುತ್ತದೆ. ಈ ಮೇಲೆ ನೀಡಿದ ಸರಳ ಸಲಹೆಗಳನ್ನು ಅನುಸರಿಸಿ, ನಿಮ್ಮ ಗುರಿಯನ್ನು ಸಾಧಿಸಬಹುದು. ನಿಯಮಿತ ಅಭ್ಯಾಸ ಮತ್ತು ಧೈರ್ಯವೇ ಯಶಸ್ಸಿನ ಕೀಲಿಕೈ.

ಯೋಗಾಭ್ಯಾಸದಿಂದಾಗುವ ಪ್ರಯೋಜನಗಳು

 

ಯೋಗ ಒಂದು ಸರಳವಾದ ಸುರಕ್ಷಿತವಾದ ಹಾಗೂ ಯಾವ ವಯಸ್ಸಿನವರೂ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಮಾಡಬಹುದಾದಂತಹ ಸುಲಭವಾದ ಸಾಧನ. ಪ್ರತಿನಿತ್ಯವೂ ದೇಹ ಅಭ್ಯಾಸ ಹಾಗೂ ನಿಯಮಿತ ಉಸಿರಾಟದ ಅಭ್ಯಾಸವನ್ನು ಕಲಿತರೆ ಯೋಗವನ್ನು ಯಾರೂ ಸಹ ಮಾಡಬಹುದು. ಇದರಿಂದ ನಮ್ಮ ದೇಹ, ಮನಸ್ಸು ಹಾಗೂ ಆತ್ಮಗಳ ನಡುವಿನ ವ್ಯತ್ಯಾಸ ತಪ್ಪಿಸಿ ಒಂದಕ್ಕೊಂದನ್ನು ಜೋಡಿಸಬಹುದು. ಇದರಿಂದ ಅನಾರೋಗ್ಯವಾಗುವುದು ಹಾಗೂ ಮಾನಸಿಕ ಒತ್ತಡದ ಸಂದರ್ಭಗಳು ತಪ್ಪುತ್ತದೆ. ದೇಹ ಹಾಗೂ ಮಾನಸಿಕ ದೃಢತೆ ಮತ್ತು ಮಾನಸಿಕ ಶಾಂತಿ, ಜ್ಞಾನ ಪಡೆಯಬಹುದು. ಆಂತರಿಕ ಶಕ್ತಿಯಿಂದ ನಾವು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸ್ಥಿಮಿತ ಕಳೆದುಕೊಳ್ಳದೇ ಮುನ್ನುಗ್ಗಬಹುದು ಹಾಗೂ ಆರೋಗ್ಯ ಜೀವನ ನಡೆಸಬಹುದು.

ಪ್ರತಿದಿನವೂ ಯೋಗದ ಅಭ್ಯಾಸ ಮಾಡುವುದರಿಂದ ಬಾಹ್ಯ ಹಾಗೂ ಆಂತರಿಕವಾಗಿ ವಿಶ್ರಾಂತಿ ಸಿಗುತ್ತದೆ ಮತ್ತು ಅನೇಕ ತರಹದ ನೋವುಗಳಿಂದ ನಿವಾರಣೆ ಪಡೆಯಬಹುದಾಗಿದೆ. ವಿವಿಧ ಭಂಗಿಗಳು ಹಾಗೂ ಆಸನಗಳ ಅಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಬಹುದು ಹಾಗೂ ನಮ್ಮ ಮೆದುಳನ್ನು ಚುರುಕುಗೊಳಿಸಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಮ್ಮ ಭಾವನೆಗಳನ್ನು ನಮ್ಮ ಹಿಡಿತದಲ್ಲಿಡಲು ಸಹಕರಿಸುತ್ತದೆ. ನಾವು ನಿಸರ್ಗದೊಡನೆ ಬೆರೆತಂತೆ ಭಾಸವಾಗುತ್ತದೆ. ಆದ್ದರಿಂದ ನಾವು ಕೂಡ ಒಳ್ಳೆಯ ಯೋಜನೆಗಳನ್ನೇ ಮಾಡುತ್ತೇವೆ. ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ನಮ್ಮೊಳಗೆ ಶಾಂತಿ ನೆಲೆಸುತ್ತದೆ.

ಯೋಗದ ಅಭ್ಯಾಸದಿಂದ ನಾವು ಪ್ರಾಯೋಗಿಕವಾಗಿ ಆಧ್ಯಾತ್ಮದೆಡೆಗೆ ಸಾಗಿದಂತೆ ಆಗುತ್ತದೆ. ಆದ್ದರಿಂದ ನಾವು ಸ್ವಯಂ ಶಿಸ್ತು ಹಾಗೂ ಸ್ವಯಂ ಅರಿವಿನೆಡೆಗೆ ಸಾಗುತ್ತೇವೆ. ಯೋಗವನ್ನು ಅಭ್ಯಾಸ ಮಾಡುವುದಕ್ಕೆ ವಯಸ್ಸು, ಧರ್ಮ, ಮೇಲು ಕೀಳಿನ ಅಡೆತಡೆಗಳಿಲ್ಲ. ಯಾರು ಬೇಕಾದರೂ ಅಭ್ಯಸಿಸಬಹುದು. ಯಾವುದಾದರೂ ಆರೋಗ್ಯ ಸಂಬಂಧಿ ವ್ಯಾಧಿಯಿಂದ ನರಳುತ್ತಿರುವವರು ಕೂಡ ಸಂಬಂಧಿಸಿದ ಆಸನ ಅಭ್ಯಾಸ ಮಾಡಿದರೆ ಅವರು ಕೂಡ ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಆದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಇಪ್ಪತ್ತೊಂದು ಜೂನ್ 21 ರಂದು 'ವಿಶ್ವ ಯೋಗ ದಿನ'ವನ್ನಾಗಿ ಘೋಷಿಸಿ ಇದರ ಪ್ರಯೋಜನವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.

ನಮ್ಮ ದೇಶದ ಪುರಾತನ ಅಭ್ಯಾಸವಾದ ಯೋಗವನ್ನು ಯೋಗಿಗಳು ಅಭ್ಯಾಸ ಮಾಡಿ ತಮ್ಮ ಆಯಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಯೋಗವು ವಿಶ್ವಕ್ಕೆ ನಮ್ಮ ದೇಶ ನೀಡಿದ ಅದ್ಭುತ ಕೊಡುಗೆಯಾಗಿದೆ. ಇದರ ಅನುಕೂಲವನ್ನು ಎಲ್ಲರೂ ಪಡೆಯಬಹುದಾಗಿದೆ.

ಮಳೆಗಾಲದಲ್ಲಿ ಆರೋಗ್ಯ

 

ಮಳೆಗಾಲ ಶುರುವಾಯಿತೆಂದರೆ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಬಹಳಷ್ಟು ಖುಷಿ. ಮಳೆಯಲ್ಲಿ ನೆನೆದು ಆಟವಾಡುವುದೆಂದರೆ ಏನೋ ಒಂದು ರೀತಿಯ ಪುಳಕ. ಆದರೆ, ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಮಳೆಯಲ್ಲಿ ನೆನೆಯಲಿ ಅಥವಾ ನೆನೆಯದೆ ಇರಲಿ ನಮ್ಮ ದೇಹಕ್ಕೆ ಅನೇಕ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಿನಿಂದ ಹಾಗೂ ಗಾಳಿಯಿಂದ ಹರಡುವಂತಹ ರೋಗಗಳಾದ ಸಾಮಾನ್ಯ ನೆಗಡಿ, ಅತಿಸಾರ, ಜಾಂಡೀಸ್ ಮತ್ತು ಮಲೇರಿಯಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 

ಮಳೆಗಾಲದ ರೋಗಗಳಿಗೆ ಮೂಲ ಕಾರಣವೆಂದರೆ, ಶುದ್ಧವಲ್ಲದ ನೀರು ಕುಡಿಯುವುದರಿಂದ ರೋಗಗಳು ಬೇಗನೆ ನಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಮಳೆಗಾಲದಲ್ಲಿ ಕುದಿಸಿ ಆರಿಸಿದ, ಶುದ್ಧೀಕರಿಸಿದ ಅಥವಾ ಶೋಧಿಸಿದ ನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ನಾವು ಬೇರೆಡೆ ಪ್ರಯಾಣಿಸುವಾಗಲೂ ಮನೆಯಿಂದ ಶುದ್ಧೀಕರಿಸಿದ ಅಥವಾ ಕುದಿಸಿ ಆರಿಸಿದ ನೀರನ್ನು ತೆಗೆದುಕೊಂಡು ಹೋಗಬೇಕು. ಹಾಗೂ ಖನಿಜ ಯುಕ್ತ ನೀರನ್ನೇ ಬಳಸಬೇಕು.

ಬಹುತೇಕ ರೋಗಗಳು ನೀರಿನಿಂದ ಹರಡುವುದರಿಂದ, ಹೊರಗಡೆ ತಿನ್ನುವಂತಹ ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸಲು ಅಥವಾ ಬೀದಿ ಬದಿಯ ಆಹಾರ ತಯಾರಿಕೆಗೆ ಯಾವ ನೀರನ್ನು ಬಳಸಿರುತ್ತಾರೆ ಎಂದು ನಾವು ತಿಳಿಯುವುದು ಕಷ್ಟ. ಆದ್ದರಿಂದ ಹೊರಗೆ ಹೋಗುವಾಗ ಮನೆಯ ಆಹಾರವನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊರಗಡೆಯ ಆಹಾರ ಸೇವಿಸದಿರುವುದೇ ಆರೋಗ್ಯಕ್ಕೆ ಹಿತಕಾರಿ. ಮಳೆಗಾಲದಲ್ಲಿ ವಾತಾವರಣ ತೇವಾಂಶದಿಂದ ಕೂಡಿದ ಹಾಗೂ ಒದ್ದೆಯಿಂದ ಇರುತ್ತದೆ. ಇದು ಬ್ಯಾಕ್ಟೀರಿಯಾ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಯಾವುದೇ ಹಳೆಯ ಆಹಾರ ಅಥವಾ ಉಳಿದಂತಹ ಆಹಾರವನ್ನು ಸೇವಿಸದಿರುವುದು ಒಳ್ಳೆಯದು.

ತೆರೆದಿಟ್ಟ ಹಣ್ಣು ಅಥವಾ ತರಕಾರಿಗಳು ನೊಣ ಮತ್ತು ಇತರ ಕೀಟಗಳನ್ನು ಆಕರ್ಷಿಸುತ್ತವೆ. ಇದು ಸೋಂಕು ಅಥವಾ ರೋಗ ಹರಡಲು ಕಾರಣವಾಗಬಹುದು. ಹಾಗಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮನೆಗೆ ತಂದು ಸ್ವಚ್ಚಗೊಳಿಸಿ ಸಾಕಷ್ಟು ಬೇಯಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮಳೆಗಾಲದಲ್ಲಿ ಒದ್ದೆಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಸಾಧ್ಯವಿದ್ದಷ್ಟು ಬೆಚ್ಚಗಿನ ಬಟ್ಟೆಗಳನ್ನು ಹಾಗೂ ಒಣಗಿದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಒಂದು ವೇಳೆ ಒದ್ದೆಯಾದರೂ ತಕ್ಷಣ ಮನೆಗೆ ತೆರಳಿ ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಬಟ್ಟೆ ಬದಲಿಸಿ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ. ಇದರಿಂದ ನೆಗಡಿಯಂತಹ ಸಾಮಾನ್ಯ ಸೋಂಕಿನಿಂದ ನಾವು ದೂರವಿರಬಹುದಾಗಿದೆ.

ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವುದು ಬುದ್ಧಿವಂತಿಕೆಯ ಮಹತ್ವವನ್ನು ತಿಳಿಸುವ ಗಾದೆಮಾತಾಗಿದೆ.  ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು  ಸಮಸ್ಯೆಗಳು ಅಥವಾ ಅನೇಕ ರೀತಿಯ ಸಂಕಟದ ಪರಿಸ್ಥಿತಿಗಳು ಎದುರಾಗುತ್ತವೆ. ಈ ಗಾದೆಮಾತು,  ಉಪಾಯ ಗೊತ್ತಿದ್ದವನಿಗೆ ಅಪಾಯ ಬರುವುದೇ ಇಲ್ಲ ಎಂದು ಹೇಳುವುದಿಲ್ಲ. ಮನುಷ್ಯನೆಂದ ಮೇಲೆ ಸಮಸ್ಯೆಗಳು, ಅಪಾಯಗಳು ಇದ್ದದ್ದೇ. ಆದರೆ ಅವುಗಳನ್ನು ಉಪಾಯವಾಗಿ ನಿಭಾಯಿಸುವುದನ್ನು ಕಲಿಯಬೇಕು. ಹೀಗೆ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿರ್ವಹಿಸುವುದರಿಂದ ಅವುಗಳಿಂದ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದೆನ್ನುವುದು ನಿಜ.  ಎಷ್ಟೋ ಸಾರಿ ಉಪಾಯ ಮತ್ತು ಮುಂದಾಲೋಚನೆಯಿಂದ ನಡೆದುಕೊಂಡರೆ ಮುಂದೆ ಬರುವ ಅಪಾಯಗಳನ್ನೂ  ತಡೆಗಟ್ಟಬಹುದು. ಶಕ್ತಿಯಿಂದ ಅಥವಾ ಬಲಪ್ರಯೋಗದಿಂದ ಕೂಡ ಆಗದ ಕೆಲಸಗಳನ್ನು ಜಾಣತನದಿಂದ  ಸುಲಭವಾಗಿ ಮಾಡಬಹುದು.  

ಹೀಗೆ ಸಮಸ್ಯೆಗಳು ಎದುರಾದಾಗ ಬುದ್ಧಿವಂತ ವ್ಯಕ್ತಿಗಳು ಅದರಿಂದ ಗಾಬರಿಗೆ ಒಳಗಾಗುವುದಿಲ್ಲ. ಅವರು ಅನಗತ್ಯ ಒತ್ತಡಕ್ಕೆ ಸಿಲುಕಿ ವಿಷಮ ಪರಿಸ್ಥಿತಿಯಿಂದ ಹೊರಬರಲು ಆತುರ ಪಡುವುದಿಲ್ಲ.ಅದರ ಬದಲು ಅವರು ಜಾಣತನದಿಂದ ಹಾಗೂ ಸಮಾಧಾನ ಚಿತ್ತದಿಂದ   ಪರಿಹಾರ  ಮಾರ್ಗವನ್ನು ಕಂಡುಕೊಳ್ಳುತ್ತಾರೆ.  ಮನುಷ್ಯನು ತನ್ನ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳದೆ, ಶಾಂತವಾದ ಮನಸ್ಸಿನಿಂದ ಯೋಚಿಸಿದರೆ ಯಾವುದೇ ಸಮಸ್ಯೆ ಇರಲಿ ಬಗೆ ಹರಿಯದೆ ಇರದು.

ಪರಿಸರದ ಸಂರಕ್ಷಣೆ

ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಇರುವ ವಾತಾವರಣ ಉದಾಹರಣೆಗೆ  ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ, ಪಶು ಪಕ್ಷಿಗು ಇತ್ಯಾದಿ.  ಮಾನವನೂ ಸಹ ಇದೆ ಪರಿಸರದ ಒಂದು ಭಾಗ. ಇನ್ನು ಪರಿಸರ ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಪರಿಸರ ಮಾಲಿನ್ಯಕ್ಕೆ ನೈಸರ್ಗಿಕ ಕಾರಣಗಳೂ ಇವೆ ಮತ್ತು ಮಾನವ ನಿರ್ಮಿತ ಕಾರಣಗಳೂ ಇವೆ.   

ಮಾನವ  ಪ್ರತಿಯೊಂದಕ್ಕೂ ಪ್ರಕೃತಿಯನ್ನೇ ಅವಲಂಬಿಸಿದ್ದಾನೆ. ನಾವು ನಮ್ಮ ದಿನನಿತ್ಯದ ಅಗತ್ಯಗಳಾದ ಆಹಾರ, ಬಟ್ಟೆ, ಗಾಳಿ, ಬೆಳಕು, ಔಷಧ ಮುಂತಾದ ಜೀವನಾವಶ್ಯಕ ಸಕಲ ಸೌಕರ್ಯಗಳಿಗೂ ಪ್ರಕೃತಿಯೇ ಜೀವನಾಧಾರವಾಗಿದೆ. ಮಾನವರಾದ ನಾವು ನಮ್ಮ ಅಜ್ಞಾನ, ದುರಾಸೆ, ದುಂದುಗಾರಿಕೆ ಹಾಗೂ ಮೋಜುಮಸ್ತಿಗಳಿಗಾಗಿ ಇಂತಹ ಅಮೂಲ್ಯವಾದ ಪರಿಸರವನ್ನು ನಾಶ ಮಾಡಿದರೆ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಈ ಸುಂದರ ಪರಿಸರದ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ

  1. ಆಧುನಿಕ ಕೈಗಾರಿಕಾ ಸ್ಥಾವರದ ರಚನಾ ವಿನ್ಯಾಸದಲ್ಲಿ ಕಶ್ಮಲ ಕಳೆಯುವುದು ತುಂಬ ಮುಖ್ಯವಾದುದು. ಘನಪದಾರ್ಥಗಳಲ್ಲಿ ತೇಲುವಂಥವು, ಯಾಂತ್ರಿಕವಾಗಿ ಪ್ರತ್ಯೇಕಿಸಬೇಕು, ಮುಳುಗುವಂಥದನ್ನು ವಿಶಿಷ್ಟ ಕೋಶಗಳಲ್ಲಿ ಕೆಳಗಿಳಿಸಿ ಬೇರ್ಪಡಿಸಬೇಕು. ಕೈಗಾರಿಕಾ ಕಶ್ಮಲದ ದುಷ್ಪರಿಣಾಮಗಳ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯ
  2. ಅರಣ್ಯಗಳು ಜನರ ಶ್ವಾಸಕೋಶಗಳು. ಇವುಗಳು ಊನವಾದರೆ ಜನರ ಜೀವನ ದುಸ್ಸಾಹಸವೇ ಸರಿ. ಆದುದರಿಂದ ಅವುಗಳ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯನಾಶವನ್ನು ತಡೆಗಟ್ಟಬೇಕು
  3. ವನಮಹೋತ್ಸವದ ಮೂಲಕ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಅರಣ್ಯ ರಕ್ಷಣೆ ಮಾಡಿ ಇಡೀ ಜಗತ್ತನ್ನು ಅಪಾಯದಿಂದ ಮಾಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  4. ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.
  5. ನಮ್ಮ ಮನೆಯ  ಸುತ್ತಮುತ್ತಲಿನ ಜಾಗವನ್ನು ಸ್ವಚ್ಚವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನೆಯ ಹಿಂದೆ ಮುಂದೆ ಜಾಗವಿದ್ದರೆ ಕೈ ತೋಟ ಮಾಡುವುದುಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು.
  6. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳು ಹರಡುವುದನ್ನು ತಡೆಗಟ್ಟಬಹುದು.

ಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರು ಕಾಡುಗಳನ್ನು, ಶುದ್ಧವಾದ ಗಾಳಿ, ನೀರನ್ನು ಹೊಂದಿರಬೇಕೆಂದರೆ ನಾವು ನಮ್ಮ ಪರಿಸರವನ್ನು ರಕ್ಷಿಸಿ ಕೊಳ್ಳಬೇಕು. ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ ಇರಬೇಕು.