ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಸಾಧಾರಣವಾಗಿ ನೋಡಲು ಸಣ್ಣ ಇದ್ದವರು ಅಥವಾ ಸಣ್ಣ ಮಕ್ಕಳು ಅಸಾಧಾರಣ ಸಾಧನೆ ಮಾಡಿದಾಗ ಹೆಚ್ಚಾಗಿ ಈ ಗಾದೆಯನ್ನು ಬಳಸುತ್ತಾರೆ. ಪ್ರಕೃತಿಯ ಸೃಷ್ಟಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಸೃಷ್ಟಿಗೂ ಅದರದ್ದೇ ಆದ ಮಹತ್ವವಿದೆ. ಉದಾಹರಣೆಗೆ ನೆಲದ ಮೇಲಿನ ಕೀಟಗಳು ಜೈವಿಕ ಕರಗುವಿಕೆಯಲ್ಲಿ ಸಹಕಾರಿ. ಹಾರಾಡುವ ಸಣ್ಣ ಸಣ್ಣ ಕೀಟಗಳು ಹೂವಿನ ಪರಾಗಸ್ಪರ್ಶದಲ್ಲಿ ಸಹಕಾರಿ. ಬಾವಲಿ ಮುಂತಾದ ಪಕ್ಷಿಗಳು ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ನಾವು ಯಾವುದೇ ಜೀವಿಯ ಆಕಾರ ನೋಡಿ ಅವುಗಳ ಶಕ್ತಿಯನ್ನು ನಿರ್ಧರಿಸಬಾರದು.

ಇನ್ನು ಮನುಷ್ಯನ ವಿಷಯಕ್ಕೆ ಬಂದರೆ ಈ ತರಹದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಕ್ರಿಕೆಟ್ ದಿಗ್ಗಜನಾದ ಸಚಿನ್ ತೆಂಡೂಲ್ಕರ್, ಭಾರತದ ಶ್ರೇಷ್ಠ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳಾಗಿದ್ದ ದಿವಂಗತ ಅಬ್ದುಲ್ ಕಲಾಂ ಅವರು, ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರ್ಯಾರೂ ದೈಹಿಕವಾಗಿ ಹೆಚ್ಚು ಎತ್ತರವಿರಲಿಲ್ಲ. ಆದರೆ ಇವರು ಮಾಡಿದ ಸಾಧನೆ ಯಾರೂ ಮರೆಯುವಂತಿಲ್ಲ. ಅಷ್ಟೇ ಏಕೆ ನಮ್ಮ ಪುರಾಣ ಕತೆಗಳಲ್ಲಿ ಬರುವ ವಿಷ್ಣುವಿನ ಅವತಾರವಾದ ವಾಮನ ಕೂಡ ಎತ್ತರವಿರಲಿಲ್ಲ. ಅವನನ್ನು ನೋಡಿ ಅಪಹಾಸ್ಯ ಕೂಡ ಮಾಡಿದರು. ಆದರೆ ಅವನು ಬಲಿ ಚಕ್ರವರ್ತಿಯಂತಹ ಮಹಾನ್ ವೀರನನ್ನೇ ತುಳಿದನಲ್ಲ!! 

ಇದೆಲ್ಲದರ ಒಳಾರ್ಥ ಏನೆಂದರೆ ನಾವು ನೋಡಲು ಹೇಗೆ ಇರಲಿ ನಮ್ಮಲ್ಲಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ, ನಂಬಿಕೆ ಹಾಗೂ ದೃಢಸಂಕಲ್ಪ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ. ಸಣ್ಣ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ದೃಢ ಮನಸ್ಸಿನಿಂದ ಮುಂದುವರೆದರೆ ಗುರಿ ಮುಟ್ಟುವುದು ಖಚಿತ.

ರಚನೆ : ಸೀಮಾ ಕಂಚೀಬೈಲು

ನಿನಿ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

ಪರಿಸರ ಮಾಲಿನ್ಯ- ಒಂದು ಪಿಡುಗು

ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಕಾಣುವ ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ. ಮಾನವ ಸೇರಿ ಉಳಿದ ಎಲ್ಲ ಜೀವಿಗಳೂ ಇಡೀ ಪರಿಸರದ ಒಂದು ಭಾಗ. ಆದರೆ ಮಾನವ ಬೇರೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಇವನ ಅತಿಯಾದ ಬುದ್ಧಿವಂತಿಕೆ ಈಗ ಪರಿಸರಕ್ಕೆ ಮಾರಕವಾಗಿದೆ. ಹೇಗೆಂದು ನೋಡೋಣ.

ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ. 

ಮಾಲಿನ್ಯದಲ್ಲಿ ನಾಲ್ಕು ವಿಧಗಳಿವೆ - ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ. 

ಮಾನವನ ದುರಾಸೆ, ಸ್ವಾರ್ಥ, ಆಧುನಿಕ ತಂತ್ರಜ್ಞಾನ, ಕೈಗಾರಿಕೀಕರಣ, ನಗರೀಕರಣ ಹಾಗೂ ಆಧುನೀಕರಣದಿಂದ ಇಡೀ ಭೂಮಿಯೇ ನಾಶವಾಗುತ್ತಿದೆ. ಇದು ಬರೀ ನಮ್ಮ ದೇಶದ ಸಮಸ್ಯೆಯೊಂದೇ ಅಲ್ಲ ಎಲ್ಲಾ ದೇಶಗಳ ಜ್ವಲಂತ ಸಮಸ್ಯೆಯಾಗಿದೆ. ಹಾಗೂ ಇದೆಲ್ಲ ಅನರ್ಥಗಳಿಗೂ ಮಾನವನೆ ನೇರ ಹೊಣೆ.

ಮಾನವ ಬುದ್ಧಿಜೀವಿ. ಆದರೆ ತನ್ನ ಅತಿಯಾದ ಕುತೂಹಲ ಹಾಗೂ ಪ್ರಕೃತಿಯ ಸಹಜ ಪ್ರಕ್ರಿಯೆಯಲ್ಲಿ ತನ್ನ ಹಸ್ತಕ್ಷೇಪ ಮಾಡಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಾನೆ. ಇದರಿಂದ ಬರೀ ಮಾನವ ಕುಲ ಮಾತ್ರವಲ್ಲ ಇಡೀ ಜೀವ ಸಂಕುಲವೇ ಅಸ್ವಸ್ಥವಾಗಿದೆ. ಮಾಲಿನ್ಯವು ಸಾಮಾಜಿಕ , ಆರ್ಥಿಕ, ದೈಹಿಕ, ಮಾನಸಿಕ ಹಾಗೂ ದೈನಂದಿನ ಕ್ರಿಯೆ ಹೀಗೆ ಪ್ರತಿಯೊಂದು ವಿಷಯಗಳಲ್ಲೂ ತನ್ನ ಪ್ರಭಾವ ಬೀರಿದೆ. ಇದರಿಂದಾಗಿ ಹೊಸ ಹೊಸ ಖಾಯಿಲೆ ಹುಟ್ಟಿಕೊಳ್ಳುತ್ತಿವೆ. 

ನಾವು ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ಭಾರಿ ಅನಾಹುತವೇ ಸಂಭವಿಸಬಹುದು. ಆದ್ದರಿಂದ ಈಗಲಾದರೂ ನಾವು ನಮ್ಮ ಸ್ವಾರ್ಥ ಬಿಟ್ಟು ಪರಿಸರದ ಕಡೆ ಗಮನ ಹರಿಸಬೇಕಾಗಿದೆ.
  •  ನಮ್ಮ ಮನೆಯ ಆಸುಪಾಸು ಗಿಡ ಮರಗಳನ್ನು ನೆಡಬೇಕು. 
  • ರಾಸಾಯನಿಕ ವಸ್ತುಗಳ ಹಾಗೂ ಬಳಕೆ ಕಡಿಮೆ ಮಾಡಬೇಕು.
  •  ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. 
  • ಮುಖ್ಯವಾಗಿ ಈಗ ಸಾಕಷ್ಟು ಸಮಸ್ಯೆ ಉಂಟು ಮಾಡಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು.
  • ಅದರ ಬದಲಿಗೆ ಬಟ್ಟೆಯ ಚೀಲ, ಸೆಣಬಿನ ನಾರಿನಿಂದ ತಯಾರಾದ ಚೀಲ ಇತ್ಯಾದಿ ನೈಸರ್ಗಿಕವಾಗಿ ಕರಗುವಂತಹ ವಸ್ತುಗಳನ್ನು ಬಳಸಬೇಕು. 

ಈ ನಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರಾಗಿ, ಶುದ್ಧವಾದ ಗಾಳಿ, ನೀರು ಹೊಂದಿರಬೇಕೆಂದರೆ ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ.


ರಚನೆ : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ವಸಂತ ಬಂದ ಋತುಗಳ ರಾಜ



PC : Kirti Sharma 

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !

ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
ಬಂದ ವಸಂತ -ನಮ್ಮಾ
ರಾಜ ವಸಂತ !!

ಕವಿ: ಬಿ. ಎಂ.ಶ್ರೀ.


ಬೆಳೆಯುವ ಸಿರಿ ಮೊಳಕೆಯಲ್ಲಿ


ಯಾವುದೇ ಒಂದು ಬೀಜ ಒಡೆದು ಮೊಳಕೆ ಬರುತ್ತಿದ್ದರೆ ಅದನ್ನು ನೋಡಿದ ಕೂಡಲೇ ಇಂತಹ ಗಿಡ ಹುಟ್ಟಬಹುದು, ಉಪಯುಕ್ತವಾದುದೋ ಅಥವಾ ವಿಷದ ಗಿಡವೋ ಎಂದು ತಿಳಿಯುತ್ತದೆ. ಒಂದು ವೇಳೆ ಅದು ಅನುಪಯುಕ್ತ ಅಥವಾ ವಿಷದ ಗಿಡವಾಗಿದ್ದರೆ ಅದನ್ನು ಮೊಳಕೆಯಲ್ಲೇ ಚಿವುಟಿಬಿಡಬಹುದು. ಹಾಗೆಯೇ ಇದರ ಹೋಲಿಕೆಯನ್ನು ಹಿರಿಯರು ನಮ್ಮ ಬೆಳೆಯುತ್ತಿರುವ ಮಕ್ಕಳ ಕುರಿತು ಹೇಳಿದ್ದಾರೆ. ಬೆಳೆಯುತ್ತಿರುವ ಮಕ್ಕಳು ಯಾವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅದು ಅವರ ಏಳಿಗೆಗೆ ಪೂರಕವೋ ಅಥವಾ ಮಾರಕವೋ ಎಂದು ತಿಳಿದುಕೊಂಡರೆ ಮುಂದೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಅವರು ದಾರಿ ತಪ್ಪುತ್ತಿದ್ದರೆ ತಕ್ಷಣವೇ ಸರಿ ದಾರಿಗೆ ತರಬಹುದು. ಅಥವಾ ಅವರಲ್ಲಿ ಯಾವುದಾದರೂ ಒಳ್ಳೆಯ ಕಲೆ ಇರಬಹುದು ಅದನ್ನು ಗುರುತಿಸಿ ಮುಂದೆ ಅದರಲ್ಲಿ ಸಾಧನೆ ಮಾಡಲು ಮಕ್ಕಳನ್ನು ಪ್ರೇರೇಪಿಸಬಹುದು.
 ಬೆಳೆಯುವ ಮಕ್ಕಳ ನಡತೆ  ಪೋಷಕರಾದವರು ಗುರುತಿಸಬೇಕಾದ ಬಹು ಮುಖ್ಯ ಅಂಶ. ಮಕ್ಕಳ ಭವಿಷ್ಯ ರೂಪಿಸಲು ಇದುವೇ ಸರಿಯಾದ ಸಮಯ ಎಂಬುದು ಈ ಗಾದೆಯ ಒಳಾರ್ಥ.


ರಚನೆ  : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಎಳೆಯುತ ಗಾಡಿ ! ಎತ್ತಿನ ಜೋಡಿ



ಎಳೆಯುತ ಗಾಡಿ ! ಎತ್ತಿನ ಜೋಡಿ
ದಡ ಬಡ ಸದ್ದಿನ ನಮ್ಗಾಡಿ


ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ
ಘಣ ! ಘಣ ! ಗ೦ಟೆ
ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ
ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ
ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ
ಘಲು ! ಘಲು ! ಘಲು ! ಗೆಜ್ಜೆ
ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು
ಗಾಡಿಯು ಓಡುವ ದಡ ಬಡ ಸದ್ದು
ದಡ ! ಬಡ ! ದಡ ! ಸದ್ದು

ಕನ್ನಡ ನಾಡಿನ ಹಣ್ಣುಗಳು








ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ

ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ

ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು

ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||

- ಕಯ್ಯಾರ ಕಿಞ್ಞಣ್ಣ ರೈ

ಕೈ ಕೆಸರಾದರೆ ಬಾಯಿ ಮೊಸರು

ಈ ಸಾರಿ ನಾವು ಹೊಸ ಅಂಕಣ ಪ್ರಾರಂಭಿಸುತ್ತಿದ್ದೇವೆ. ಅದು ಗಾದೆಗಳ ವಿಸ್ತರಣೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನುಡಿಗಟ್ಟು ಇದೆ. ನಮ್ಮ ಹಿರಿಯರು ತಮ್ಮ ಜೀವನಾನುಭವದಿಂದ ಸಾವಿರಾರು ಗಾದೆಗಳನ್ನು  ಬರೆದರು. ಇತ್ತೀಚಿನ ದಿನಗಳಲ್ಲಿ ಗಾದೆಗಳನ್ನು ಬಳಸುವುದನ್ನು ಎಲ್ಲರೂ ಕಡಿಮೆ ಮಾಡಿದ್ದೇವೆ. ಹೀಗಾಗಿ ನಮಗೆ ಗೊತ್ತಿರುವ ಗಾದೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. 

ಕೈ ಕೆಸರಾದರೆ ಬಾಯಿ ಮೊಸರು
ರೈತನು ಕೆಸರು ಗದ್ದೆಯಲ್ಲಿ ಇಡೀ ವರ್ಷ ಕಷ್ಟ ಪಟ್ಟು ದುಡಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ. ಇದೊಂದು ಉದಾಹರಣೆ ಅಷ್ಟೇ. ಹೀಗೆ  ನಾವು ಯಾವುದೇ ಕೆಲಸ ಫಲ ಕೊಡಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೇಗೆ ಒಬ್ಬ ಶಿಲ್ಪಿ ತನ್ನ ಪರಿಶ್ರಮದಿಂದ ಒಂದು ಬಂಡೆಗಲ್ಲನ್ನು ಕೆತ್ತಿ ಸುಂದರ ಶಿಲ್ಪ ಕಲಾಕೃತಿಯನ್ನಾಗಿ ಮಾಡುವನೋ ಹಾಗೆಯೇ ನಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುತ್ತದೆ. ಶಿಕ್ಷಕರು ಮಾಡಿದ ಪಾಠಗಳನ್ನು ಗಮನ ಇಟ್ಟು ಓದಿದರೆ ಒಂದು ಒಳ್ಳೆಯ ಗುರಿ ಸಾಧಿಸಬಹುದು. ಆಲಸಿಗಳಾಗದೆ ಶ್ರಮದಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡರೆ ಗಮನೀಯ ಸಾಧನೆಗೆ ನಾಂದಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ.


ರಚನೆ : ಸೀಮಾ ಕಂಚೀಬೈಲು


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಗಣೇಶ ಚತುರ್ಥಿ

ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಹಾಗೂ ವೈಭವದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸಲಾಗುತ್ತದೆ. 

    ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ. ಮೊದಲನೆ ದಿನ ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ   ಮಂಟಪಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಅಲಂಕರಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ವಿನಾಯಕನ ಪೂಜಿಸಲಾಗುತ್ತದೆ.ಈ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ.  ಆದರೆ ಮೋದಕ ಅಥವಾ ಕಡುಬುಗಳ ನೈವೇದ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. 


    ಮೊದಲು ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು.ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. 


    ಹೀಗೆ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು. ಅದರಂತೆ ಈಗಲೂ ಸ್ಥಳೀಯ ಸಮೀತಿಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ.11ನೇ ದಿನ ವಿಗ್ರಹವನ್ನು  ನೃತ್ಯ, ಹಾಡು ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ  ಮೆರವಣಿಗೆ ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ನಂತರ ಗಣೇಶನ ವಿಗ್ರಹವನ್ನು ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. 

    ಸಿದ್ಧಿ ದಾಯಕನಾದ, ಬುದ್ಧಿಗೆ ಅಧಿದೇವತೆಯೂ ಆದ, ವಿಘ್ನ ನಿವಾರಕನ ಆರಾಧನೆಯು ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬವಾಗಿದೆ. 



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ 
ಧನ್ಯವಾದಗಳು 

ಕರ್ನಾಟಕದ ಜಲ ಸಂಪನ್ಮೂಲ

ಕರ್ನಾಟಕದ ಪ್ರಮುಖ ನದಿಗಳು:

ತುಂಗಭದ್ರಾ, ಕೃಷ್ಣ, ಕಾವೇರಿ, ಗೋದಾವರಿ, ಘಟಪ್ರಭಾ, ಅರ್ಕಾವತಿ, ವೇದಾವತಿ, ಷಿಂಷಾ, ಕಬಿನಿ, ಮಹದಾಯಿ, ಕಾಳಿ, ಶರಾವತಿ, ವಾರಾಹಿ, ಭದ್ರಾ, ನೇತ್ರಾವತಿ, ತುಂಗಾ, ಅಘನಾಶಿನಿ, ಭೀಮಾ

ರಾಜ್ಯದ ಪ್ರಮುಖ ಜಲ ವಿದ್ಯುತ್ ಯೋಜನೆಗಳು :

  • ಶಿವನ ಸಮುದ್ರ - ಕಾವೇರಿ 
  • ಶಿಂಷಾ ಯೋಜನೆ – ಕಾವೇರಿ
  • ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು
  • ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರ – ಶರಾವತಿ
  • ಸೂಪಾ ,ನಾಗಝರಿ, ಕದ್ರ ,ಕೊಡಪಳ್ಳಿ ಯೋಜನೆ –  ಕಾಳಿನದಿ
  •  ವಾರಾಹಿ ಯೋಜನೆ – ವಾರಾಹಿ ನದಿ
  • ಮಾರಿಕಣಿವೆ – ವೇದಾವತಿ
  • ಆಲಮಟ್ಟಿ – ಕೃಷ್ಣ ನದಿ
  • ಭದ್ರ ಜಲಾಶಯ - ತುಂಗಾಭದ್ರ ನದಿ
  • ಹೊಸಪೇಟೆ ಜಲಾಶಯ  – ತುಂಗಾಭದ್ರ ನದಿ


ರಾಜ್ಯದ  ಪ್ರಮುಖ ಜಲಪಾತಗಳು

  • ಜೋಗ ಜಲಪಾತ – ಶರಾವತಿ ನದಿ
  • ಗೊಕಾಕ್ ಜಲಪಾತ – ಘಟಪ್ರಭ ನದಿ
  • ಮಾಗೋಡು ಜಲಪಾತ – ಬೆಡ್ತಿ ನದಿ
  • ಬಂಡಾಜೆ ಜಲಪಾತ – ನೇತ್ರಾವತಿ ನದಿ
  • ಉಂಚಳ್ಳಿ ಜಲಪಾತ- ಅಘನಾಶಿನಿ ನದಿ
  • ಛಾಯಭಗವತಿ ಜಲಪಾತ – ದೋಣಿನದಿ
  • ಚುಂಚನಕಟ್ಟೆ, ಶಿಂಷಾ ಜಲಪಾತ - ಕಾವೇರಿ ನದಿ
  •  ಭರಚುಕ್ಕಿ,ಗಗನಚುಕ್ಕಿ ಜಲಪಾತ – ಕಾವೇರಿ ನದಿ

ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು



ಬಣ್ಣದ ಗೊಂಬೆ









ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ

ಚೆನ್ನಪಟ್ಟಣದ ಬಣ್ಣದ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ

ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ

ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ

ಕವಿ:- ಶಾ೦ತಿರಾಂ


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಹತ್ತು ಹತ್ತು ಇಪ್ಪತ್ತು



ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು
ಕೈಯಲಿ ಒಂದು ಕಲ್ಲಿತ್ತು

ಮೂವತ್ತು ಹತ್ತು ನಲವತ್ತು
 ಎದುರಿಗೆ ಮಾವಿನ ಮರವಿತ್ತು

ನಲವತ್ತು ಹತ್ತು ಐವತ್ತು
ಮರದಲಿ ಕಾಯಿಯು ತುಂಬಿತ್ತು

ಐವತ್ತು ಹತ್ತು ಅರವತ್ತು
ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪತಪ ಉದುರಿತ್ತು

ಎಪ್ಪತ್ತು ಹತ್ತು ಎಂಭತ್ತು
ಮಾಲಿಯ ಕಂಡನು ಸಂಪತ್ತು

ಎಂಭತ್ತು ಹತ್ತು ತೊಂಭತ್ತು
ಕಾಲುಗಳೆರಡು ನಡುಗಿತ್ತು

ತೊಂಭತ್ತು ಹತ್ತು ನೂರು
ಮನೆಯನು ತಲುಪಿದ ಸಂಪತ್ತು



ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಕರುನಾಡನ್ನು ತಿಳಿಯೋಣ


ಮೈಸೂರು ರಾಜ್ಯದ ಸ್ಥಾಪನೆ: 1 ನವೆಂಬರ್ 1956
ನವೆಂಬರ್ 1,1973 ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ರಾಜಧಾನಿ: ಬೆಂಗಳೂರು
ಭಾಷೆ : ಕನ್ನಡ
ಚಿಹ್ನೆ : ಗಂಡಬೇರುಂಡ
ನಾಡಗೀತ :ಜಯ ಭಾರತ ಜನನಿಯ ತನುಜಾತೆ (ಕವಿ:ಕುವೆಂಪು)
ಜಿಲ್ಲೆಗಳು : 30
ತಾಲ್ಲೂಕುಗಳು : ಸುಮಾರು 220
ಶಾಸಕಾಂಗ : ದ್ವಿಸಭೆ (224 + 75)
ವಿಸ್ತೀರ್ಣ : 1,91, 791 ಚದರ ಕಿಮಿ

ಪ್ರಮುಖ ನಗರಗಳು :
ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು,
ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಬೆಳಗಾವಿ

ಸ್ವಾಭಾವಿಕ ವಿಭಾಗಗಳು :

1. ಕರಾವಳಿ
2. ಮಲೆನಾಡು
3. ಬಯಲು ಸೀಮೆ

ಕರ್ನಾಟಕ ಪ್ರಮುಖ ಅಭಯಾರಣ್ಯಗಳು :

  • ಬಂಡೀಪುರ ಅಭಯಾರಣ್ಯ, 
  • ಬನ್ನೇರುಘಟ್ಟ ಅಭಯಾರಣ್ಯ, 
  • ನಾಗರಹೊಳೆ ಅಭಯಾರಣ್ಯ, 
  •  ಕುದುರೆಮುಖ
  •  ಅಂಶಿ ಅಭಯಾರಣ್ಯ. 

ಕರ್ನಾಟಕ ವನ್ನು ಆಳಿದ ಪ್ರಮುಖ ರಾಜವಂಶಗಳು :

  • ಶಾತವಾಹನರು
  • ಕದಂಬರು
  • ಗಂಗರು
  • ಬಾದಾಮಿಯ ಚಾಳುಕ್ಯರು
  • ರಾಷ್ಟ್ರಕೂಟರು
  • ಕಲ್ಯಾಣದ ಚಾಳುಕ್ಯರು
  • ಹೊಯ್ಸಳರು
  • ಬಹಮನಿ ಸುಲ್ತಾನರು
  • ಮೈಸೂರಿನ ಒಡೆಯರು 


ಪ್ರಮುಖ ಐತಿಹಾಸಿಕ ಸ್ಥಳಗಳು:

  • ಬಾದಾಮಿ, ಐಹೊಳೆ, ಪಟ್ಟದಕಲ್ಲು
  • ಬೇಲೂರು, ಹಳೇಬೀಡು, 
  • ಶ್ರವಣಬೆಳಗೊಳ, ಸಕಲೇಶಪುರ
  • ಹಂಪೆ
  • ವಿಜಯಪುರ
  • ಮೈಸೂರು
  • ಶ್ರೀರಂಗಪಟ್ಟಣ, 
  • ಮೇಲುಕೋಟೆ, 
  • ಚಿತ್ರದುರ್ಗ
  • ಭದ್ರಾವತಿ
  • ಬೀದರ್
  • ಬನವಾಸಿ
  • ಉಡುಪಿ

ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳು

  • ಕೆನರಾ ಬ್ಯಾಂಕ್
  • ಸಿಂಡಿಕೇಟ್ ಬ್ಯಾಂಕ್
  • ಕಾರ್ಪೊರೇಷನ್ ಬ್ಯಾಂಕ್
  • ವಿಜಯ ಬ್ಯಾಂಕ್
  • ವೈಶ್ಯಾ ಬ್ಯಾಂಕ್
  • ಕರ್ನಾಟಕ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು


ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳು :

  • ಮೈಸೂರು ವಿಶ್ವವಿದ್ಯಾಲಯ, ಮೈಸೂರು
  • ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
  • ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
  • ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ
  • ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು
  • ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
  • ತುಮಕೂರು ವಿಶ್ವವಿದ್ಯಾಲಯ, ತುಮಕೂರು
  • ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
  • ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
  • ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
  • ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
  • ಕೃಷಿ ವಿಶ್ವವಿದ್ಯಾಲಯ, ಧಾರವಾಡ
  • ಕೃಷಿ ವಿಶ್ವವಿದ್ಯಾಲಯ, ರಾಯಚೂರು
  • ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
  • ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
  • ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ
  • ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
  • ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
  • ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
  • ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
  • ಕನ್ನಡ ವಿಶ್ವವಿದ್ಯಾಲಯ, ಹಂಪಿ
  • ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ





ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಶಿಕ್ಷಕರ ದಿನಾಚರಣೆ


ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ 
ಗುರುಸಾಕ್ಷಾತ್ ಪರಃ ಬ್ರಹ್ಮ ತಸ್ಮೈಶ್ರೀ ಗುರವೇ ನಮಃ...

     
 ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ವಿದ್ಯಾರ್ಥಿ ಎಂಬ ಕಲ್ಲನ್ನು, ಕೆತ್ತಿ, ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಹೀಗೆ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು. ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ , ಶಿಕ್ಷಕರ ದಿನಾಚರಣೆ. ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. 


       ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ  ಭಾರತದ ಮೊದಲ ಉಪ ರಾಷ್ಟ್ರಪತಿ ಹಾಗೂ ದ್ವಿತೀಯ ರಾಷ್ಟ್ರಪತಿ,  ಶಿಕ್ಷಕ, ದಾರ್ಶನಿಕ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವನ್ನು  ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತೇವೆ. 

     ಈ ದಿನದಂದು ಮಕ್ಕಳಿಗೆ ಎಲ್ಲಿಲ್ಲದ  ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಚಿತ್ರಗಳನ್ನು ಪುಸ್ತಕಗಳ ಮೇಲೆ ಅಂಟಿಸಿ ಸಂತಸಪಡುತ್ತಾರೆ. ಶಿಕ್ಷಕರ ಕುರಿತು  ಭಾಷಣ ಮಾಡಿ ಸಂತಸದಿಂದ ಬೀಗುತ್ತಾರೆ. ವಿದ್ಯಾರ್ಥಿಗಳು  ತಮ್ಮ ನೆಚ್ಚಿನ ಶಿಕ್ಷಕರಿಗಾಗಿ  ಶುಭಸಂದೇಶಗಳನ್ನೂ  ಗ್ರೀಟಿಂಗ್ ಕಾರ್ಡ್ಗಳನ್ನೂ  ತಮ್ಮ ಕೈಯಿಂದ ಮಾಡಿ ಕೊಡುತ್ತಾರೆ. .ಇಷ್ಟೇ ಅಲ್ಲದೆ  ವಿದ್ಯಾರ್ಥಿಗಳು  ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದರಿಂದ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂಬ ಹೆಮ್ಮೆ .  ಎಲ್ಲಾ  ಶಾಲೆಗಳು ತಮ್ಮ ಹಿರಿಯ ವರ್ಗದ  ವಿದ್ಯಾರ್ಥಿಗಳಿಗೆ ಈ ಒಂದು ದಿನದ ಮಟ್ಟಿಗೆ ಶಿಕ್ಷಕನಾಗುವ ಅವಕಾಶವನ್ನು ಮಾಡಿಕೊಡುತ್ತವೆ. ಮಕ್ಕಳು ಕೂಡ ಈ ಜವಾಬ್ದಾರಿಯನ್ನು ತುಂಬಾ ಖುಷಿಯಿಂದ  ನಿರ್ವಹಿಸುತ್ತಾರೆ 

       ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿಗೆ ಶಿಕ್ಷಕರೇ ಮೊದಲ ಆದರ್ಶ. ಇಂಥ ಸ್ಥಿತಿಯಲ್ಲಿ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಹಸಿ ಮಣ್ಣಿನ ಮುದ್ದೆಯಂತೆ ಇರುವ ಮಗುವಿನ ಮನಸ್ಸನ್ನು ತಿದ್ದಿ ತೀಡಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು.


       ಗುರು ಎಂದರೆ  ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನ  ಕರೆದುಕೊಂಡು ಹೋಗುವ ಮಾರ್ಗದರ್ಶಕ . ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು .


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ

ಧನ್ಯವಾದಗಳು




ಗಾಳಿಪಟ








ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

ಜ್ಞಾನಪೀಠ ಯಾರಿಗೆ? ಯಾವಾಗ?




ಕುವೆಂಪು
ಕೃತಿ : ಶ್ರೀ ರಾಮಾಯಣ ದರ್ಶನಂ
ವರ್ಷ :  1967

ದ. ರಾ. ಬೇಂದ್ರೆ
ಕೃತಿ : ನಾಕುತಂತಿ
ವರ್ಷ : 1973

ಶಿವರಾಮ ಕಾರಂತ
ಕೃತಿ : ಮೂಕಜ್ಜಿಯ ಕನಸುಗಳು
ವರ್ಷ :  1977

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃತಿ : ಚಿಕವೀರ ರಾಜೇಂದ್ರ
ವರ್ಷ :1983

ವಿ. ಕೃ. ಗೋಕಾಕ
ಕೃತಿ : ಭಾರತ ಸಿಂಧುರಶ್ಮಿ
ವರ್ಷ :1990

ಯು. ಆರ್. ಅನಂತಮೂರ್ತಿ
ಕೃತಿ :  ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1994

ಗಿರೀಶ್ ಕಾರ್ನಾಡ್
ಕೃತಿ : ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1998

ಚಂದ್ರಶೇಖರ ಕಂಬಾರ
ಕೃತಿ :   ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  2010


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು