ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಸಾಧಾರಣವಾಗಿ ನೋಡಲು ಸಣ್ಣ ಇದ್ದವರು ಅಥವಾ ಸಣ್ಣ ಮಕ್ಕಳು ಅಸಾಧಾರಣ ಸಾಧನೆ ಮಾಡಿದಾಗ ಹೆಚ್ಚಾಗಿ ಈ ಗಾದೆಯನ್ನು ಬಳಸುತ್ತಾರೆ. ಪ್ರಕೃತಿಯ ಸೃಷ್ಟಿಯಲ್ಲಿ ಪ್ರತಿಯೊಂದು ಸಣ್ಣಪುಟ್ಟ ಸೃಷ್ಟಿಗೂ ಅದರದ್ದೇ ಆದ ಮಹತ್ವವಿದೆ. ಉದಾಹರಣೆಗೆ ನೆಲದ ಮೇಲಿನ ಕೀಟಗಳು ಜೈವಿಕ ಕರಗುವಿಕೆಯಲ್ಲಿ ಸಹಕಾರಿ. ಹಾರಾಡುವ ಸಣ್ಣ ಸಣ್ಣ ಕೀಟಗಳು ಹೂವಿನ ಪರಾಗಸ್ಪರ್ಶದಲ್ಲಿ ಸಹಕಾರಿ. ಬಾವಲಿ ಮುಂತಾದ ಪಕ್ಷಿಗಳು ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗೆ ನಾವು ಯಾವುದೇ ಜೀವಿಯ ಆಕಾರ ನೋಡಿ ಅವುಗಳ ಶಕ್ತಿಯನ್ನು ನಿರ್ಧರಿಸಬಾರದು.

ಇನ್ನು ಮನುಷ್ಯನ ವಿಷಯಕ್ಕೆ ಬಂದರೆ ಈ ತರಹದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಕ್ರಿಕೆಟ್ ದಿಗ್ಗಜನಾದ ಸಚಿನ್ ತೆಂಡೂಲ್ಕರ್, ಭಾರತದ ಶ್ರೇಷ್ಠ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳಾಗಿದ್ದ ದಿವಂಗತ ಅಬ್ದುಲ್ ಕಲಾಂ ಅವರು, ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇವರ್ಯಾರೂ ದೈಹಿಕವಾಗಿ ಹೆಚ್ಚು ಎತ್ತರವಿರಲಿಲ್ಲ. ಆದರೆ ಇವರು ಮಾಡಿದ ಸಾಧನೆ ಯಾರೂ ಮರೆಯುವಂತಿಲ್ಲ. ಅಷ್ಟೇ ಏಕೆ ನಮ್ಮ ಪುರಾಣ ಕತೆಗಳಲ್ಲಿ ಬರುವ ವಿಷ್ಣುವಿನ ಅವತಾರವಾದ ವಾಮನ ಕೂಡ ಎತ್ತರವಿರಲಿಲ್ಲ. ಅವನನ್ನು ನೋಡಿ ಅಪಹಾಸ್ಯ ಕೂಡ ಮಾಡಿದರು. ಆದರೆ ಅವನು ಬಲಿ ಚಕ್ರವರ್ತಿಯಂತಹ ಮಹಾನ್ ವೀರನನ್ನೇ ತುಳಿದನಲ್ಲ!! 

ಇದೆಲ್ಲದರ ಒಳಾರ್ಥ ಏನೆಂದರೆ ನಾವು ನೋಡಲು ಹೇಗೆ ಇರಲಿ ನಮ್ಮಲ್ಲಿ ಸಾಧಿಸಬೇಕೆಂಬ ಛಲ, ಆತ್ಮವಿಶ್ವಾಸ, ನಂಬಿಕೆ ಹಾಗೂ ದೃಢಸಂಕಲ್ಪ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ. ಸಣ್ಣ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ದೃಢ ಮನಸ್ಸಿನಿಂದ ಮುಂದುವರೆದರೆ ಗುರಿ ಮುಟ್ಟುವುದು ಖಚಿತ.

ರಚನೆ : ಸೀಮಾ ಕಂಚೀಬೈಲು

ನಿನಿ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು 

9 comments: